ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಕ್ಕಳಿಂದಲೇ ಕುರುಕ್ಷೇತ್ರ ಪೌರಣಿಕ ನಾಟಕ ಪ್ರದರ್ಶಿಸಲು ಆಸಕ್ತಿ ಇರುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲು ಆಡಿಷನ್ ನಡೆಸಲು ಮುಂದಾಗಿದ್ದು, ಜೂನ್ ೧೫ರಂದು ಚನ್ನರಾಯಪಟ್ಟಣದಲ್ಲಿರುವ ಮಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಇಲ್ಲಿ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ರಾಜೇಶ್ ಹಾಗೂ ಗೌರವಾಧ್ಯಕ್ಷ ಜಿ.ಎಸ್. ರಾಜಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಚನ್ನರಾಯಪಟ್ಟಣದಲ್ಲಿ ಕಳೆದ ೩ ವರ್ಷಗಳಿಂದ ಮಕ್ಕಳಿಂದ, ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಆರಂಭಿಸಲಾಗಿರುವ ಮಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್, ಕನ್ನಡ ನಾಡಿನ ಕಲೆ, ಸಂಸ್ಕೃತಿ, ಜನಪದ, ನೃತ್ಯ, ನಾಟಕ, ಗಾಯನ ಸೇರಿದಂತೆ ಭಾರತದ ಮಣ್ಣಿನ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಾ ಬಂದಿದೆ. ಟ್ರಸ್ಟ್ನಡಿ ಈಗಾಗಲೇ ನೃತ್ಯ, ಅಭಿನಯದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಆಯ್ದುಕೊಂಡು ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜಿಸಿ, ಹಾಡು, ನೃತ್ಯದೊಂದಿಗೆ ವೀಡಿಯೋ ಹೊರತರಲಾಗಿದೆ. ಇದು ಯೂಟ್ಯೂಬ್ನಲ್ಲಿ ಈಗಾಗಲೇ ಪ್ರಸಾರಗೊಳ್ಳುತ್ತಿದೆ ಎಂದರು.
ಇದೀಗ ಟ್ರಸ್ಟ್ ಮುಂದುವರಿದ ಭಾಗವಾಗಿ ಮಕ್ಕಳಿಂದ ಕುರುಕ್ಷೇತ್ರ ಪೌರಣಿಕ ನಾಟಕವನ್ನು ಅಭಿನಯಿಸುವ ಇಂಗಿತದೊಂದಿಗೆ, ನಾಟಕದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಆಡಿಷನ್ ನಡೆಸಲು ಮುಂದಾಗಿದ್ದೇವೆ. ದುರ್ಯೋಧನ, ಭೀಮ, ಅರ್ಜುನ, ಕೃಷ್ಣ, ಕರ್ಣ, ಅಭಿಮನ್ಯು, ಶಕುನಿ, ವಿಧುರ, ದ್ರೋಣಾಚಾರ್ಯ ಸೇರಿದಂತೆ ವಿವಿಧ ಪಾತ್ರಗಳಿಗಾಗಿ ೨೦ ಗಂಡು ಮಕ್ಕಳು, ಮತ್ತು ಮಹಿಳೆಯರ ಪಾತ್ರಕ್ಕಾಗಿ ೮ ಮಂದಿ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದರ ಆಯ್ಕೆಯನ್ನು ೨೦೨೫ ಜೂನ್ ೧೬ರಂದು ಮಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಇಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.ಹೆಚ್ಚಿನ ವಿವರಗಳಿಗೆ ಶ್ರೀ ಮಾರುತಿ ಎಲೆಕ್ಟ್ರಾನಿಕ್ಸ್ ಲ್ಯಾಂಡ್, ಲಕ್ಷ್ಮಮ್ಮ ರಂಗಪ್ಪ ಸಂಕೀರ್ಣ ಭುವನೇಶ್ವರಿ ವೃತ್ತ, ಬಾಗೂರು ರಸ್ತೆ, ಚನ್ನರಾಯಪಟ್ಟಣ ಮೊ: ೯೭೩೯೯೦೧೫೦೦ ರಾಜೇಶ್ ಕೆಂಚೆನಹಳ್ಳಿ ಇವರನ್ನು ಸಂಪರ್ಕಿಸಬಹುದು. ಆಯ್ಕೆಯಾದ ಮಕ್ಕಳಿಗೆ ಚನ್ನರಾಯಪಟ್ಟಣದಲ್ಲಿನ ನಮ್ಮ ಕಚೇರಿಯಲ್ಲಿ ನಾಟಕ ಕಲಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ನ ಕೆ.ಆರ್. ನಾಗರಾಜು, ಸಂಗೀತ ನಿರ್ದೇಶಕ ಜಿ.ಆರ್. ಶ್ರೀನಿವಾಸ್, ನಾಟಕ ನಿರ್ದೇಶಕ ಪ್ರಜ್ವಲ್ ಜಗದೀಶ್ ಇತರರು ಉಪಸ್ಥಿತರಿದ್ದರು.