ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿ: ಬಿ.ಜಯರಾಂ ನೆಲ್ಲಿತಾಯ

| Published : Mar 02 2025, 01:19 AM IST

ಸಾರಾಂಶ

ಕೆರೆಗಳನ್ನು ಪುನಶ್ಚೇತನ ಮಾಡುವುದರಿಂದ ಈ ಪ್ರದೇಶದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವುದಲ್ಲದೆ ಕೃಷಿ ಭೂಮಿ ಫಲವತ್ತತೆಯಿಂದ ಕೂಡಿರುತ್ತವೆ. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಹೂಳೆತ್ತಿರುವ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಸ್ಥರು ಮಿತವಾಗಿ ಬಳಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ಕೆರೆಗಳ ಹೂಳೆತ್ತುವುದರಿಂದ ಹೆಚ್ಚು ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಂ ನೆಲ್ಲಿತಾಯ ತಿಳಿಸಿದರು.

ತಾಲೂಕಿನ ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಹೂಳೆತ್ತಿದ್ದ ಕೆರೆಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಮಹಿಳೆಯರ ಜೊತೆಗೂಡಿ ಬಾಗಿನ ಅರ್ಪಿಸಿ, ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರ ಆಶಯದಂತೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ರಾಜ್ಯವ್ಯಾಪಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆರೆಗಳು ರೈತರ ಕೃಷಿ ಚಟುವಟಿಕೆಗೆ ಮೂಲ ಆಧಾರ ಮತ್ತು ಆಸರೆಯಾಗಿರುತ್ತವೆ ಎಂದರು.

ಕೆರೆಗಳನ್ನು ಪುನಶ್ಚೇತನ ಮಾಡುವುದರಿಂದ ಈ ಪ್ರದೇಶದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವುದಲ್ಲದೆ ಕೃಷಿ ಭೂಮಿ ಫಲವತ್ತತೆಯಿಂದ ಕೂಡಿರುತ್ತವೆ. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದರು.

ಹೂಳೆತ್ತಿರುವ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಸ್ಥರು ಮಿತವಾಗಿ ಬಳಸಿಕೊಳ್ಳಬೇಕು. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವವರೆಗೂ ಜಾನುವಾರುಗಳಿಗೆ ಮತ್ತು ಹಕ್ಕಿ ಪಕ್ಷಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೀರನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳಬೇಕು. ಇಂತಹ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಗ್ರಾಮಸ್ಥರು ಪೂರ್ಣಪ್ರಮಾಣದಲ್ಲಿ ಸಹಕಾರ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸಂಸ್ಥೆ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೊಣನೂರು ಹನುಮಂತಯ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ರೀತಿಯ ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಹಳ್ಳಿಗಾಡಿನ ಜನರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ಜನರು ಸಂಸ್ಥೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನ, ತಾಲೂಕು ಯೋಜನಾಧಿಕಾರಿ ಕೆ.ದಿವಾಕರ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಲಕ್ಷ್ಮಿ, ಸಮಿತಿ ಕಾರ್ಯದರ್ಶಿ ಬೋರೇಗೌಡ, ಜನಜಾಗೃತಿ ವೇದಿಕೆ ಸದಸ್ಯರಾದ ರಾಧಾ, ಯೋಗೇಶ್, ಗ್ರಾಮದ ಮುಖ್ಯಸ್ಥರಾದ ಮಲ್ಲೇಗೌಡ, ಅಣ್ಣೇಗೌಡ, ನಂಜುಂಡೇಗೌಡ, ದೇವಲಿಂಗೇಗೌಡ, ಮಾದೇಗೌಡ, ಪ್ರಭುದೇವಗೌಡ, ಬಸವರಾಜೇಗೌಡ, ಮಲ್ಲೇಶ್‌ಗೌಡ, ವಲಯ ಮೇಲ್ವಿಚಾರಕ ರಮೇಶ್, ಕೃಷಿ ಮೇಲ್ವಿಚಾರಕ ರಾಕೇಶ್ ಸೇರಿದಂತೆ ಗ್ರಾಮದ ಮಹಿಳೆಯರು ಇದ್ದರು.