ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ವರಮಹಾಲಕ್ಷ್ಮಿ ಪೂಜೆಯು ಮಹಿಳೆಯರಿಗೆ ಸಂಭ್ರಮದ ಹಬ್ಬವಾಗಿದ್ದು, ಸೌಭಾಗ್ಯದ ಸಂಕೇತವಾಗಿದೆ ಎಂದು ಡಿಸಿಎಂಸಿ ಶಾಲೆ ಉಪನ್ಯಾಸಕಿ ಮಧುರಾ ಮಂಜುನಾಥ್ ತಿಳಿಸಿದರು.ಮಹಾವೀರಭವನದಲ್ಲಿ ಧ.ಗ್ರಾ.ಯೋಜನೆ ನರಸಿಂಹರಾಜಪುರ ವಲಯದ ಸಿಂಸೆ, ನ.ರಾ.ಪುರ ಹಾಗೂ ಬಸ್ತಿಮಠದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಮಹಿಳೆಯರಿಗೆ ಆರೋಗ್ಯ ತಪಾಸಣೆ ಹಾಗೂ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ವರಮಹಾಲಕ್ಷ್ಮಿ ಪೂಜೆ ಆಡಂಬರದ ಪೂಜೆಯಾಗಬಾರದು. ಭಕ್ತಿಯಿಂದ ಪೂಜೆ ನೆರವೇರಿಸಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂದರು.
ನಿವೃತ್ತ ಕನ್ನಡ ಶಿಕ್ಷಕ ಕೆ.ಎಸ್.ರಾಜಕುಮಾರ್ ಹಬ್ಬಗಳ ವಿಶೇಷತೆ ಬಗ್ಗೆ ಮಾತನಾಡಿ, ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯಿಂದ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಹಿಂದೆ ಕೂಡು ಕುಟುಂಬ ಇತ್ತು. ಮನೆಗಳಲ್ಲಿ ನಡೆಯುವ ಹಬ್ಬಗಳ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಿ ಸಂಭ್ರಮ ಪಡುತ್ತಿದ್ದರು. ಮಕ್ಕಳಿಗೆ ಹಬ್ಬಗಳ ವೈಶಿಷ್ಠತೆ ತಿಳಿಯುತ್ತಿತ್ತು. ಪ್ರತಿಯೊಂದು ಹಬ್ಬಕ್ಕೂ ಧಾರ್ಮಿಕತೆ ಹಾಗೂ ವೈಜ್ಞಾನಿಕ ಕಾರಣಗಳಿವೆ. ಈಗ ಕುಟುಂಬ ಸಣ್ಣದಾಗಿದೆ ಮನೆಯಲ್ಲಿ ಹಬ್ಬಗಳ ನೈವೇದ್ಯದ ಸಿಹಿಯನ್ನು ಸಹ ಅಂಗಡಿಗಳಿಂದ ತರುವಂತಾಗಿದೆ ಎಂದರು.ಧ.ಗ್ರಾ.ಯೋಜನೆ ನರಸಿಂಹರಾಜಪುರ ವಲಯ ಮೇಲ್ವೀಚಾರಕ ಸಿದ್ದಲಿಂಗಪ್ಪ ಮಾತನಾಡಿ, ಧ.ಗ್ರಾ.ಯೋಜನೆಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಹೇಮಾವತಿ ಅಮ್ಮನವರು ಮಹಿಳಾ ಜ್ಞಾನ ವಿಕಾಸ ಕೇಂದ್ರವನ್ನು ಹುಟ್ಟು ಹಾಕಿದ್ದಾರೆ. ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧಕರಿಂದ ಉಪನ್ಯಾಸ, ಸದಸ್ಯರಿಗಾಗಿ ಆಟೋಟ ಸ್ಪರ್ಧೆ, ಅಧ್ಯಯನ ಪ್ರವಾಸ, ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಅನಾವರಣಗೊಳಿಸಲಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆ ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ನಿಶಾಲ್ ಮಹಿಳೆಯರ ಆರೋಗ್ಯಕ್ಕೆ ಸಂಬಂಧ ಪಟ್ಟ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಸಭೆ ಅಧ್ಯಕ್ಷತೆಯನ್ನು ಪ್ರಭಾವತಿ ವಹಿಸಿದ್ದರು. ಸಭೆಯಲ್ಲಿ ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ನ.ರಾ,ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ, ಸಂಯೋಜಕಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿ ಭಾನುಮತಿ, ವೀಣಾ, ಸುನೀತಾ, ವಿಮಲಾ ಇದ್ದರು.ನಂತರ ಆರೋಗ್ಯ ಇಲಾಖೆ ವೈದ್ಯರು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದರು. ಕಲಾವಿದರಾದ ವಿಶ್ರೇಯ ಹಾಗೂ ವಿದ್ಯಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.