ಸಾರಾಂಶ
- ಮಾಯಕೊಂಡ ಶಾಸಕ ಬಸವಂತಪ್ಪ ಅಸಮಾಧಾನ ।
ಗೋಪನಾಳು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆಅಧಿಕಾರಿಗಳ ಬೇಜವಾಬ್ದಾರಿ, ಆಗಾಗ ಭೇಟಿ ನೀಡಿ ಶಿಕ್ಷಕರಿಗೆ ಎಚ್ಚರಿಕೆ ನೀಡದ ಪರಿಣಾಮ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗೋಪನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಒಂದೇ ಸೂರಿನಡಿ ಎಲ್ಕೆಜಿ ತರಗತಿಯಿಂದ ಪಿಯುಸಿವರೆಗೂ ಶಾಲೆ ಮತ್ತು ಕಾಲೇಜುಗಳು ಇವೆ. ಆದರೆ ಮಕ್ಕಳ ದಾಖಲಾತಿ ಕೊರತೆ ಇದೆ. ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಯು ಆಗಾಗ ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಆಂದೋಲನ ನಡೆಸಬೇಕು, ಶಾಲಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಕೈಗೊಳ್ಳುವ ಕಾರ್ಯ ಚಟುವಟಿಕೆ ಹಾಗೂ ಉತ್ತಮ ಫಲಿತಾಂಶ ಬಾರದಿದ್ದರೆ ಶಿಕ್ಷಕರಿಗೆ ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಶಾಲಾ- ಕಾಲೇಜುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಹೀಗೆ ಮೂಲಸೌಲಭ್ಯ ಕಲ್ಪಿಸಿ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗದಿರುವುದೇ ಇವತ್ತು ಮಕ್ಕಳ ಸಂಖ್ಯೆ ಕೊರತೆ ಎದುರಾಗಲು ಕಾರಣವಾಗುತ್ತಿದೆ ಎಂದರು.ಸರ್ಕಾರಿ ಶಾಲೆ ಮಕ್ಕಳಿಗೆ ವಾರಕ್ಕೆ 6 ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ ಇಲ್ಲಿ ಎರಡ್ಮೂರು ಮೊಟ್ಟೆ ಕೊಡಲಾಗುತ್ತದೆ ಎಂದು ಮಕ್ಕಳು ದೂರುತ್ತಾರೆ. ಇದೇ ಒಂದೇ ಶಾಲೆಯಲ್ಲ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಸರ್ಕಾರ ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಿದೆ. ನೀವು ಅದನ್ನೇ ಸರಿಯಾಗಿ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಿಸಿದ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.
ಗ್ರಾಮಸ್ಥರು, ಶಿಕ್ಷಕರು ಆಂದೋಲನ ಮೂಲಕ ಶಾಲಾ ಮತ್ತು ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳನ್ನು ಉಳಿಸಿಕೊಂಡು, ಬೆಳೆಸಬೇಕು ಎಂದರು.ಸಮಾರಂಭದಲ್ಲಿ ಬಸವರಾಜಪ್ಪ, ಲಿಂಗರಾಜಣ್ಣ, ನೂರುಲ್ಲಾ, ರಾಮಚಂದ್ರಪ್ಪ, ಸುರೇಶಣ್ಣ, ಮಲ್ಲಿಕಾರ್ಜುನಯ್ಯ, ಲಿಂಗರಾಜ್, ರವಿ, ಅಂಜಿನಪ್ಪ, ಶೇಖರಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗರಾಜ್, ಕಾಲೇಜು ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ರಾಮಜ್ಜ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- - -(ಬಾಕ್ಸ್)
* ಶಿಕ್ಷಕರು-ಮಕ್ಕಳೊಂದಿಗೆ ಸಮಾಲೋಚನೆಸರ್ಕಾರಿ ಪ್ರೌಢಶಾಲೆಯ 8, 9 ಹಾಗೂ 10ನೇ ತರಗತಿಗಳಿಗೆ ಭೇಟಿ ನೀಡಿದ ಶಾಸಕ ಕೆ. ಎಸ್ ಬಸವಂತಪ್ಪ ಅವರು, ಮಕ್ಕಳ ಹಾಜರಾತಿ, ಶಿಕ್ಷಣ ಗುಣಮಟ್ಟ ಹಾಗೂ ಅಕ್ಷರ ದಾಸೋಹ ಹಾಗೂ ಇತರೆ ಆಗುಹೋಗುಗಳ ಬಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಎಚ್ .ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿಯೂ ಸಮಾಲೋಚನೆ ನಡೆಸಿದರು.
- - --25ಕೆಡಿವಿಜಿ38.ಜೆಪಿಜಿ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗೋಪನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.-25ಕೆಡಿವಿಜಿ39: ದಾವಣಗೆರೆ ತಾಲೂಕು ಎಚ್.ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಕೆ.ಎಸ್. ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.