ಹುಬ್ಬಳ್ಳಿ:
ಎಲ್ಪಿಜಿ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಬೇಕು ಮತ್ತು ಆಟೋ ಚಾಲಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ರಸ್ತೆಯಲ್ಲಿ ಖಾಲಿ ಸಿಲಿಂಡರ್ ಇಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ನಿಲಿಜಿಯನ್ ರಸ್ತೆಯಿಂದ ತಹಸೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ರಸ್ತೆ ಮಧ್ಯದಲ್ಲಿ ಖಾಲಿ ಸಿಲಿಂಡರ್ ಹಾಗೂ ಅಗತ್ಯ ವಸ್ತು ಇಟ್ಟು ಬೆಲೆ ಏರಿಕೆ ಖಂಡಿಸಿದರು. ನಂತರ ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ರಿಕ್ಷಾ ಚಾಲಕರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಈಗ ಅಮೆರಿಕ-ಇರಾನ್ ಯುದ್ಧದ ಪರಿಣಾಮದಿಂದ ಎಲ್ಪಿಜಿ, ಪೆಟ್ರೊಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ನಿತ್ಯದ ದುಡಿಮೆಯಲ್ಲಿ ಉಪಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಲ್ಪಿಜಿ ದರ ಪ್ರತಿ ಲೀಟರ್ಗೆ ₹ 58-61ರಿಂದ ಇದೀಗ ₹95-105ಕ್ಕೇರಿದೆ. ಅಭಾವದ ನೆಪದಲ್ಲಿ ಬೆಲೆ ಏರಿಕೆ ಮಾಡುತ್ತಿರುವ ಏಜೆನ್ಸಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಆಟೋ ರಿಕ್ಷಾ ಚಾಲಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅದರಂತೆ ಬೈಕ್, ಟ್ಯಾಕ್ಸಿಗಳ ಕುರಿತು ಹೈಕೋರ್ಟ್ ನೀಡಿರುವ ಆದೇಶದ ಮರುಪರಿಶೀಲನೆಗೆ ಸರ್ಕಾರ ಅರ್ಜಿ ಸಲ್ಲಿಸಬೇಕು. ಇಲ್ಲವೇ, ಸುಗ್ರೀವಾಜ್ಞೆ ಮೂಲಕ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ(2019) ಹಿಂಪಡೆದು ಬೈಕ್ ಟ್ಯಾಕ್ಸಿ ನಿಷೇಧಿಸಬೇಕು. ಆಟೋ, ಟ್ಯಾಕ್ಸಿ ಚಾಲಕರು, ಸಾರಿಗೆ ಚಾಲಕರ ಮತ್ತು ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಕಲ್ಯಾಣ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಬಜೆಟ್ನಲ್ಲಿ ₹ 500 ಕೋಟಿ ಮೀಸಲು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜೀವನ ಉತ್ಕುರಿ, ಮುರಳಿ ಇಂಗಳಹಳ್ಳಿ, ರಾಜೇಶ ಬಿಜವಾಡ, ದಾವಲಸಾಬ್ ಕುರಹಟ್ಟಿ, ಶ್ರೀಕಾಂತ ಗಡಾದ, ಮಹೇಶ ದೊಡ್ಡಮನಿ, ಇಮ್ತಿಯಾಜ್ ಉಡುಪಿ, ಶ್ರೀಕಾಂತ ಕಲಾಲ, ಅಮರ ಗದಗ, ಶಂಕರ ಆಚಾರ್ಯ, ದಾವುದ್ಅಲಿ ಶೇಖ್, ಅಣ್ಣಪ್ಪ ಗುಡಿಹಾಳ ಸೇರಿದಂತೆ ಹಲವರಿದ್ದರು.