ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ

| Published : Jun 16 2025, 11:59 PM IST

ಸಾರಾಂಶ

ಪ್ರಸಕ್ತ ಸಾಲಿನ ಆಗಸ್ಟ್ 1ರೊಳಗೆ ಆಟೋ ರಿಕ್ಷಾಗಳಿಗೆ ಸಂಬಂಧಿಸಿದ ಚಾಲನ ಪರವಾನಗಿ, ಎಫ್ ಸಿ,ವಿಮಾ, ಪರ್ಮಿಟ್, ಸಮವಸ್ತ್ರ ಇನ್ನಿತರೆ ದಾಖಲಾತಿಗಳು ಕಡ್ಡಾಯವಾಗಿ ಆಟೋ ಚಾಲಕರು ಹೊಂದಿರಬೇಕು

ಕನ್ನಡಪ್ರಭ ವಾರ್ತೆ ಪಾವಗಡ

ಪ್ರಸಕ್ತ ಸಾಲಿನ ಆಗಸ್ಟ್ 1ರೊಳಗೆ ಆಟೋ ರಿಕ್ಷಾಗಳಿಗೆ ಸಂಬಂಧಿಸಿದ ಚಾಲನ ಪರವಾನಗಿ, ಎಫ್ ಸಿ,ವಿಮಾ, ಪರ್ಮಿಟ್, ಸಮವಸ್ತ್ರ ಇನ್ನಿತರೆ ದಾಖಲಾತಿಗಳು ಕಡ್ಡಾಯವಾಗಿ ಆಟೋ ಚಾಲಕರು ಹೊಂದಿರಬೇಕು. ಇಲ್ಲವಾದಲ್ಲಿ ದಂಡದ ಬದಲು ಕೇಸು ದಾಖಲಿಸಿ ಆಟೋವನ್ನು ಸೀಜ್ ಮಾಡಲಾಗುವುದೆಂದು ಆಟೋ ಚಾಲಕರಿಗೆ ಪಾವಗಡ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಎಸ್ ಎಸ್ ಕೆ ಹಳೇ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪವಿಭಾಗ, ಪಾವಗಡ ಪೊಲೀಸ್ ಠಾಣೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಆಟೋ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿಗೆ ರಸ್ತೆ ಹಾಗೂ ಇತರೆ ಅಪಘಾತಗಳು ಹೆಚ್ಚಾಗುತ್ತಿವೆ.ಈ ಹಿನ್ನಲೆ ಆಟೋ ಚಾಲಕರು ಸಾರಿಗೆ ಇಲಾಖೆಯ ನಿಯಮ ಪಾಲನೆ ಅಗತ್ಯವಾಗಿದೆ.ಮಾನದಂಡಗಳನ್ನು ಅನುಸರಿಸದೆ, ಅಗತ್ಯ ದಾಖಲಾತಿಗಳಿಲ್ಲದೆ ಬೇಕಾಬಿಟ್ಟಿ ಆಟೋ ಚಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಆಗಸ್ಟ್ 1 ರೊಳಗೆ ದಾಖಲಾತಿ ಸರಿಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಆಟೋಗಳಿಗೆ ಸಂಬಂಧ ಪಟ್ಟ ದಾಖಲಾತಿ ನೀಡಿ ಪೊಲೀಸ್ ಠಾಣೆಯ ಕ್ರಮ ಸಂಖ್ಯೆಯನ್ನು ಪಡೆದು ಆಟೋಗಳನ್ನು ಚಲಾಯಿಸುವಂತೆ ಆಟೋ ಚಾಲಕರಿಗೆ ಸಂದೇಶ ನೀಡಿದರು.ಜೂ.16ರಿಂದ ರಸ್ತೆ ಸುರಕ್ಷಾ ನಿಯಮಗಳು, ಕಡ್ಡಾಯವಾಗಿ ಸಮವಸ್ತ್ರ, ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬುವುದನ್ನು ನಿಷೇಧಿಸಿದೆ. ಪ್ರಯಾಣಿಕರೊಂದಿಗೆ ಸಭ್ಯತೆ ಯಿಂದ ವರ್ತಿಸುವುದು, ಸರತಿ ಸಾಲಿನಲ್ಲಿ ಆಟೋಗಳ ನಿಲುಗಡೆ ಇತರೆ ಇಲಾಖೆಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ಕಟ್ಟಪ್ಪಣೆಯ ಸೂಚನೆಗಳನ್ನು ನೀಡಿದರು. ಆಟೋ ಚಾಲಕರ ಸಮಸ್ಯೆಗಳನ್ನು ಅಳಿಸಿದ ಇನ್ಸ್‌ಪೆಕ್ಟರ್‌ ಸುರೇಶ್, ಗ್ಯಾಸ್ ಬಂಕ್ ಸ್ಥಾಪನೆ, ಆಟೋ ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯ, ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಆಟೋ ದಾಖಲಾತಿಗಳನ್ನು ಸರ್ಕಾರ ನಿಗದಿಪಡಿಸಿರುವ ವೆಚ್ಚದಲ್ಲಿ ಸರಿಪಡಿಸಲು ಸಾರಿಗೆ ಇಲಾಖೆ ಅಧಿಕಾರಿ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ವ್ಯಕ್ತಪಡಿಸಿದರು.ಇದೇ ವೇಳೆ ಪೊಲೀಸ್ ಪೇದೆಗಳಾದ ಪ್ರವೀಣ್, ದೀಪಕ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್, ಆಟೋ ಚಾಲಕರ ಸಂಘಟನೆಯ ಪದಾಧಿಕಾರಿಗಳು ಹಾಗೂ ಸುಮಾರು 200 ಕ್ಕೂ ಹೆಚ್ಚು ಆಟೋ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.