ಸಾರಾಂಶ
ಶಂಕರನಾರಾಯಣ ಅವಧೂತರು ಸಮಾಜ ಸೇವೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡಿರುವುದು ಬಹಳ ಸಂತೋಷದ ಸಂಗತಿ. ಅವರಲ್ಲಿರುವ ಅಗಾಧ ಜ್ಞಾನವನ್ನು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಮುಕ್ತವಾಗಿಸಿದ್ದು, ಮುಂದಿನ ದಿನಗಳಲ್ಲಿ ಅವರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಲಭಿಸಲಿ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಉತ್ತಮ ಸಮಾಜ ನಿರ್ಮಾಣದ ಕಾರ್ಯದಲ್ಲಿ ಅನೇಕ ಮಹನೀಯರ ಕೊಡುಗೆ ಅನನ್ಯವಾಗಿದ್ದು, ಅವಧೂತರ ಪರಂಪರೆ ಸಮಾಜಕ್ಕೆ ಪ್ರೇರಕವಾಗಿದೆ. ಈ ನಿಟ್ಟಿನಲ್ಲಿ ಮಠಗಳು ನಿರಂತರ ಸೇವೆ ಸಲ್ಲಿಸುತ್ತಿವೆ ಎಂದು ಓಂಕಾರಾಶ್ರಮದ ಮಧುಸೂದನಾನಂದಪುರಿ ಸ್ವಾಮೀಜಿ ಹೇಳಿದರು.ನಗರದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಸ್ವಯಂಪೂರ್ಣಾನಂದನಾಥ ಅವಧೂತ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸಮಾಜದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿರುತ್ತದೆ. ಇದರ ಮಧ್ಯ ಆತನ ಸಾಧನೆಯನ್ನು ಮಾತ್ರ ನಾವು ಗುರುತಿಸಲು ಸಾಧ್ಯ. ಸಮಸ್ಯೆಗಳನ್ನು ಎದುರಿಸುವ ಜತೆಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಈ ಭೂಮಿ ಮೇಲೆ ಜೀವಿಸುವ ಹಕ್ಕು ಹೇಗಿದೆಯೋ ಹಾಗೆ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇಂತಹ ವ್ಯಕ್ತಿತ್ವವನ್ನು ಹೊಂದಿದಾಗ ಮಾತ್ರ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ಕುಟುಂಬ ಹಾಗೂ ಸಮಾಜದ ಜತೆ ಬದುಕನ್ನು ಕಟ್ಟಿಕೊಳ್ಳಬೇಕು. ಸಮಾಜವನ್ನು ಸರಿದಾರಿಗೆ ತರಲು ಹಿರಿಯರು, ಸಾಧು ಸಂತರ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.ನಿವೃತ್ತ ನ್ಯಾಯಾಧೀಶ ಡಾ.ಎಂ.ಆರ್.ರಂಗನಾಥ ಮಾತನಾಡಿ, ಶಂಕರನಾರಾಯಣ ಅವಧೂತರು ಸಮಾಜ ಸೇವೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡಿರುವುದು ಬಹಳ ಸಂತೋಷದ ಸಂಗತಿ. ಅವರಲ್ಲಿರುವ ಅಗಾಧ ಜ್ಞಾನವನ್ನು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಮುಕ್ತವಾಗಿಸಿದ್ದು, ಮುಂದಿನ ದಿನಗಳಲ್ಲಿ ಅವರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ಲಭಿಸಲಿ ಎಂದರು.
ಸ್ವಯಂಪೂರ್ಣಾನಂದನಾಥ ಅವಧೂತರು ಮಾತನಾಡಿ, ಬರುವ ದಿನಗಳಲ್ಲಿ ಪರಿಪೂರ್ಣವಾಗಿ ಸಾರ್ವಜನಿಕ ಸೇವೆಗೆ ತೊಡಗಿಸಿ ಕೊಂಡು ಹಿರಿಯ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದಿಂದ ಒಂದು ಶಕ್ತಿ ಪೀಠ ನಿರ್ಮಾಣದ ಕೆಲಸವನ್ನು ಆರಂಭಿಸಲಾಗುವುದು ಎಂದರು.ಹೊನ್ನಾಳಿ ಸೇವಾಲಾಲ್ ಪೀಠದ ಬಾಲಕೃಷ್ಣ ಮಹಾರಾಜ್, ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಸಾದ್ವಿ ಉನ್ಮೃಶ ಭಾರತಿ, ಲೇಖಕ ಪ್ರಾಣೇಶ್ ರಾವ್, ಜ್ಯೋತಿಷಿ ಮೋಹನ್ ಕುಮಾರ್, ಉದ್ಯಮಿ ಡಾ. ನಾಗರಾಜ ಸುಬ್ರಮಣ್ಯ, ಪ್ರಾಂಶುಪಾಲ ಡಾ.ಕುಮಾರ್, ವೀರಭದ್ರ ಬ್ಯಾಡಗಿ, ಕರ್ನಲ್ ಹರ್ಷ, ಡಾ.ಜಾಫರ್, ನಳಿನಿ ಬಾಯಿ, ಎನ್.ವಿ.ಪ್ರಸಾದ್ ಇದ್ದರು.