ಮಂಗಳೂರು: ಸೋನಳಿಕೆ ಪ್ರಶಾಂತಿ ಮಹಿಳಾ ಮಂಡಲ (ರಿ) ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ ನಾಲ್ಕು ದಿನಗಳ ಬೇಸಿಗೆ ಶಿಬಿರ ಅಳಪೆ ಕರ್ಮಾರಿನ ಮಹಾದೇವಿ ಭಜನಾ ಮಂದಿರದಲ್ಲಿ ನಡೆಯಿತು.ಸಮಾರೋಪದಂದು ಆರೋಗ್ಯ ಭಾರತಿಯ ಮಂಗಳೂರು ಜಿಲ್ಲಾ ಗೌರವಾಧ್ಯಕ್ಷ ಡಾ. ಮುರಳೀ ಮೋಹನ ಚೂಂತಾರು ಅವರು ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಹಲ್ಲುಗಳ ಆರೋಗ್ಯ ಸಂರಕ್ಷಣೆಯ ಕುರಿತಾಗಿ ಮಾಹಿತಿ ನೀಡಿದರು. ಜಂಕ್ ಆಹಾರ ಮತ್ತು ದಿಡೀರ್ ಆಹಾರ ಸೇವನೆಯಿಂದ ದೇಹದ ಆರೋಗ್ಯ ಹದಗೆಡುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಹಸಿವು ಇಲ್ಲದಾಗಿ ಜೀರ್ಣ ಶಕ್ತಿ ಕುಂದುತ್ತದೆ, ದೇಹ ರೋಗಗಳ ಹಂದರವಾಗುತ್ತದೆ. ಮ್ಯಾಗಿ, ನೂಡಲ್ಸ್, ಪಿಜ್ಜಾ, ಬರ್ಗರ್, ಪೆಪ್ಸಿ, ಕೋಕ್ ತ್ಯಜಿಸಿ ಎಂದು ಅವರು ಮಕ್ಕಳಿಗೆ ಕಿವಿ ಮಾತು ನುಡಿದರು.ಶಿಬಿರದಲ್ಲಿ ಸುಮಾರು 38 ಮಕ್ಕಳು ಭಾಗವಹಿಸಿದ್ದರು. ಪ್ರಶಾಂತಿ ಮಹಿಳಾ ಮಂಡಲದ ಶೈಲಜಾ ಸತೀಶ್, ಬಾಲಗೋಕುಲ ಶಿಕ್ಷಕಿ ಅದಿತಿ ಯತೀಶ್, ಆರೋಗ್ಯ ಭಾರತಿಯ ಮಂಗಳೂರು ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಚಂದ್ರಗಿರಿ ಇದ್ದರು.