ಸಾರಾಂಶ
ದೊಡ್ಡಬಳ್ಳಾಪುರ: ಈಗಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ದಾಸರಾಗಿದ್ದ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕು ಎಂದು ಪಿಸಿವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಪೋಷಕರಿಗೆ ಸಲಹೆ ಮಾಡಿದರು.
ದೊಡ್ಡಬಳ್ಳಾಪುರ: ಈಗಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ದಾಸರಾಗಿದ್ದ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕು ಎಂದು ಪಿಸಿವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಪೋಷಕರಿಗೆ ಸಲಹೆ ಮಾಡಿದರು.
ಇಲ್ಲಿನ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ಪ್ರತಿಭೋತ್ಸವ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಮೇಲೆ ಪರಿಣಾಮವಾಗಿ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ. ಮೊಬೈಲ್ನಿಂದ ದೂರವಿರಿಸಿ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಭರತನಾಟ್ಯ, ಸಂಗೀತ, ಸಾಹಿತ್ಯ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಅಗತ್ಯ ಎಂದು ಹೇಳಿದರು.ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ದೊಡ್ಡಬಳ್ಳಾಪುರ ಹಲವಾರು ಮಹನೀಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಯೋಗ, ಭರತನಾಟ್ಯ, ವಿವಿಧ ಕಲಾ ಚಟುವಟಿಕೆಗಳಲ್ಲಿ ಇಲ್ಲಿನ ಪ್ರತಿಭೆಗಳು ಗಮನ ಸೆಳೆದಿದ್ದಾರೆ. ಇಲ್ಲಿನ ಹಲವು ಸಾಂಸ್ಕೃತಿಕ ಸಂಸ್ಥೆಗಳು ಉತ್ತಮ ಕಲಾ ತರಬೇತಿಯನ್ನು ಮಕ್ಕಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮೆಮೊರಿ ತರಬೇತುದಾರರಾದ ಡಾ. ಮಾದೇವಿ ಚೌದರಿ ಮಾತನಾಡಿ, ತಮ್ಮ ಕಾರ್ಯಕ್ರಮಗಳಲ್ಲಿ ಮೊದಲು ದೊಡ್ಡಬಳ್ಳಾಪುರಕ್ಕೆ ಆದ್ಯತೆ ನೀಡುತ್ತೇವೆ. ಉತ್ತಮ ಪ್ರತಿಭೆಗಳು ತಾವೂ ಬೆಳೆದು ಇತರರನ್ನೂ ಬೆಳೆಸುವ ಶಕ್ತಿ ಪಡೆದಿರುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಗ ಪ್ರತಿಭೆಗಳಾದ ಬಿ.ಎಂ.ಕೀರ್ತನ, ಪುನೀತ್ ಕೊಂಗಾಡಿ, ರಾಧಾ ಸ್ವರೂಪ, ಕೀರ್ತನ ಮತ್ತಿತರರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ, ಗಾಯನ ಕಾರ್ಯಕ್ರಮಗಳನ್ನು ನೀಡಿದ ಬಾಲ ಪ್ರತಿಭೆಗಳನ್ನು ಅಭಿನಂದಿಸಲಾಯಿತು.
ಶಾಸಕ ಧೀರಜ್ ಮುನಿರಾಜ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸಿ.ವೆಂಕಟರಾಜು, ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪದ್ಮ ಕೃಷ್ಣಮೂರ್ತಿ, ಕಲಾವಿದೆ ಎಂ.ಕೆ.ನವ್ಯಶ್ರೀ, ಖಜಾಂಚಿ ಅನುಷಾ, ಕಜಾವೇ ತಾ.ಅಧ್ಯಕ್ಷ ಶಶಿಧರ್, ದೈಹಿಕ ಶಿಕ್ಷಕ ಎಚ್.ನಾಗರಾಜ್, ದಾದಾಫೀರ್, ಕಲಾವಿದ ಮಂಜುನಾಥ್, ಚೆರ್ರಿ ಸುಬ್ಬು, ಮುಖ್ಯಶಿಕ್ಷಕಿ ಮಾನಸ, ಕಲಾವಿದರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಎಸ್ಟಿಆರ್ಡಿಪಿಆರ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.1ಕೆಡಿಬಿಪಿ2- ದೊಡ್ಡಬಳ್ಳಾಪುರದ ನವ್ಯ ಕಲ್ಚರಲ್ ಅಕಾಡೆಮಿ ವಾರ್ಷಿಕೋತ್ಸವ ಡಾ.ರಾಜ್ಕುಮಾರ್ ಕಲಾ ಮಂದಿರದಲ್ಲಿ ಸಂಭ್ರಮದಿಂದ ನಡೆಯಿತು.