ಕಂಪ್ಲಿ: ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಬದ್ಧ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿ ಚುನಾವಣಾ ಅಧಿಕಾರಿಗಳ ನೇಮಕದ ಮೂಲಕ ರಚನೆಯಾಗಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕವೇ ಅಧಿಕೃತ ಸಂಘವಾಗಿದೆ ಎಂದು ತಾಲೂಕು ಅಧ್ಯಕ್ಷ ಹನುಮಂತಪ್ಪ ಹೇಳಿದರು.
ಪಟ್ಟಣದ ನಟರಾಜ ಸಂಘದ ಬಳಿಯ ಸಹಿಪ್ರಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಿಪಿಎಆರ್ ಮಾನ್ಯತೆ ಪಡೆದಿರುವ ಚಂದ್ರಶೇಖರ ನುಗ್ಲಿಯವರ ನೇತೃತ್ವದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಡಿಯಲ್ಲಿ ಕಂಪ್ಲಿ ತಾಲೂಕು ಘಟಕ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯರಾಗಿರುವ ಎಲ್ಲ ಶಿಕ್ಷಕರು ಸದಸ್ಯತ್ವ ಶುಲ್ಕ ಪಾವತಿಸುವ ಮೂಲಕ ಸಂಘವನ್ನು ಇನ್ನಷ್ಟು ಬಲಪಡಿಸಬೇಕು. ಶಿಕ್ಷಕರ ಹಕ್ಕುಗಳ ರಕ್ಷಣೆ, ಸೇವಾ ಸಮಸ್ಯೆಗಳ ಪರಿಹಾರ ಹಾಗೂ ಶಿಕ್ಷಣದ ಗುಣಮಟ್ಟ ವೃದ್ಧಿಗಾಗಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಶಿಕ್ಷಕರ ಏಕತೆ ಮತ್ತು ಸಂಘಟಿತ ಶಕ್ತಿಯಿಂದ ಮಾತ್ರ ಸೇವಾ ಹಿತಾಸಕ್ತಿಗಳನ್ನು ಸಮರ್ಥವಾಗಿ ಕಾಪಾಡಿಕೊಳ್ಳಲು ಸಾಧ್ಯ. ಸಂಘದ ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಸಕ್ರಿಯವಾಗಿ ಪಾಲ್ಗೊಂಡು ಸಂಘವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಕರೆ ನೀಡಿದರು.ಈ ವೇಳೆ ರಾಜ್ಯ ಸಮಿತಿಗೆ ರಾಜನಾಯಕ್, ರವಿ ಹಾಗೂ ಕುಮಾರಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಗೆ ವೀರಕುಮಾರ್, ಮಲ್ಲಿಕಾರ್ಜುನ್, ಕರುಣಾಕರಾಚಾರ್, ಮಲ್ಲಿಕಾರ್ಜುನ ಹಾಗೂ ಚಿಕ್ಕಜಾಯಿಗನೂರು ಮೂರ್ತಿ ಅವರನ್ನು ಆಯ್ಕೆಗೊಳಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಎಚ್. ಜಡಿಯಪ್ಪ, ಐ. ಗಂಗಮ್ಮ, ಸಿ.ಕೆ. ರಾಮಚಂದ್ರಪ್ಪ, ಸುನಿತಾ ಪೂಜಾರ್, ಕೆ. ಚಂದ್ರಶೇಖರ್, ಕೆ. ವೀರೇಶ್, ಅಗಳಿ ನಾಗರತ್ನಾ, ಮಾಲಿಕ್, ಮರಿಸ್ವಾಮಿ, ಸುನಿತಾ, ಕೆ. ರಾಜೇಶ್ವರಿ, ಸದಾಶಿವ ಹಾಗೂ ದೊಡ್ಡಬಸಪ್ಪ ಅವರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.