ಸಾರಾಂಶ
ಸಖರಾಯಪಟ್ಟಣದ ಬಾಣೂರಿನ ನೂತನ ಶ್ರಿ ಗವಿ ರಂಗನಾಥಸ್ವಾಮಿ ದೇಗುಲ ಪ್ರಾರಂಭೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇವಾಲಯಗಳ ನಿರ್ಮಾಣದಿಂದ ಜನರಲ್ಲಿ ಸಂಸ್ಕಾರ ಪ್ರಜ್ಞೆ ತರಬೇಕೆಂಬುದು ನಮ್ಮ ಆಶಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಸಖರಾಯಪಟ್ಟಣ ಹೋಬಳಿ ಬಾಣೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರಿ ಗವಿ ರಂಗನಾಥಸ್ವಾಮಿ ದೇವಾಲಯದ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿದರು. ದೇವಾಲಯದ ಗರ್ಭಗುಡಿ ಒಳಗೆ ತೆಗೆದುಕೊಂಡು ಹೋದ ನೀರು ಹೊರ ಬರುವಾಗ ತೀರ್ಥವಾಗುತ್ತದೆ. ಹಣ್ಣು ಕಾಯಿ ಪ್ರಸಾದವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಉತ್ತಮ ಸಂಸ್ಕಾರವಂತ ಪ್ರಜೆಗಳಾಗಬೇಕೆಂಬುದು ನನ್ನ ಆಶಯ ಎಂದು ಹೇಳಿದರು. ಯಾವುದೇ ಗ್ರಾಮದಲ್ಲಿ ದೇವಾಲಯ ಜೀರ್ಣೋದ್ಧಾರ, ನೂತನ ದೇವಸ್ಥಾನ ಪ್ರಾರಂಭೋತ್ಸವ ಮಾಡುವುದು ಎಷ್ಟು ಮುಖ್ಯವೋ ಪ್ರತಿನಿತ್ಯ ಪೂಜೆ ಸಲ್ಲಿಸುವುದು ಅಷ್ಟೇ ಮುಖ್ಯ ಎಂದು ಹೇಳಿದರು. ಈಗಾಗಲೇ ಹಲವಾರು ದೇವಾಲಯಗಳ ನಿರ್ಮಾಣ ಮಾಡಿರುವುದು, ಪ್ರಾರಂಭೋತ್ಸವ ನೋಡಿದ್ದೇವೆ. ನಿತ್ಯ ಪೂಜೆ ಇಲ್ಲದೆ ದೇವಾಲಯಗಳು ಬಿಕೋ ಎನ್ನುತ್ತಿವೆ. ಅದಕ್ಕಾಗಿ ಸುವ್ಯವಸ್ಥಿತವಾದ ಪೂಜಾ ಕೈಂಕರ್ಯಗಳನ್ನು ಗ್ರಾಮಸ್ಥರು ಮಾಡುವ ಮೂಲಕ ಭಕ್ತಿ ಪ್ರಧಾನವಾಗಬೇಕು.ಶ್ರೀ ಗವಿ ರಂಗನಾಥ ಸ್ವಾಮಿ ಆಶೀರ್ವಾದ ಬಾಣೂರಿಗೆ ಸೀಮಿತವಾಗದೆ ಈ ಭಾಗದ ಎಲ್ಲರಿಗೂ ದೊರೆಯುವಂತಾಗಲಿ ಎಂದು ಹಾರೈಸಿದರು. ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್ ಪ್ರತಿಪಾದನೆ ಮಾಡಿದ ಪರಿಣಾಮ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿ, ಇಂದು ನಾವೆಲ್ಲರೂ ಅಧಿಕಾರದಲ್ಲಿದ್ದೇವೆಂದರೆ ಅವರು ಹಾಕಿ ಕೊಟ್ಟ ಮಾರ್ಗದರ್ಶನದಿಂದ ಸಮಾನತೆ ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಒಡೆದು ಹರಿದು ಹಂಚಿ ಹೋಗಿರುವ ಕುಟುಂಬ ವ್ಯವಸ್ಥೆ ದೇವಸ್ಥಾನದಲ್ಲಿ ಬಂದು ಪ್ರಾರ್ಥನೆ ಮಾಡುವ ಮೂಲಕ ಒಗ್ಗೂಡಬೇಕಾದ ಅಗತ್ಯ ಇದೆ ಎಂದು ಹೇಳಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗವಿರಂಗಪ್ಪ ಮಾತನಾಡಿದರು. ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿದರು. ಗ್ರಾಪಂ ಸದಸ್ಯ ರೇಣುಕಾಮೂರ್ತಿ, ಗ್ರಾಮಸ್ಥರಾದ ಈಶ್ವರಪ್ಪ, ಸಿದ್ದಪ್ಪ, ಶಾಂತಪ್ಪ, ದಯಾಶಂಕರ್ ಉಪಸ್ಥಿತರಿದ್ದರು. ಸಿದ್ದಪ್ಪ ಸ್ವಾಗತಿಸಿದರು.
1 ಕೆಸಿಕೆಎಂ 3ಸಖರಾಯಪಟ್ಟಣ ಹೋಬಳಿ ಬಾಣೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರಿ ಗವಿ ರಂಗನಾಥಸ್ವಾಮಿ ದೇವಾಲಯದ ಪ್ರಾರಂಭೋತ್ಸವ ನೆರವೇರಿಸಿ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿದರು.