ಪ್ರಶಸ್ತಿಗಳು ಸಾಧನೆಗೆ ಗೌರವ ಸಲ್ಲಿಸಲು ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿಯನ್ನು ತುಂಬಲು ಇರುವುದಾಗಿದ್ದು, ಪ್ರಸಕ್ತ ಹವ್ಯಕ ಮಹಾಸಭೆಯ 83 ವರ್ಷದ ಹುಟ್ಟುಹಬ್ಬದ ಆಚರಣೆಯ ಜೊತೆಗೆ ಸಾಧಕರ ಸಾಧನೆಯ ಸಂಭ್ರಮಾಚರಣೆಯನ್ನೂ ವಿಶೇಷ ಪ್ರಶಸ್ತಿ ಪ್ರದಾನದ ಜೊತೆಗೆ ಮಾಡಲಾಗುತ್ತಿದೆ  - ಗಿರಿಧರ ಕಜೆ  

ಬೆಂಗಳೂರು : ಪ್ರಶಸ್ತಿಗಳು ಸಾಧನೆಗೆ ಗೌರವ ಸಲ್ಲಿಸಲು ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿಯನ್ನು ತುಂಬಲು ಇರುವುದಾಗಿದ್ದು, ಪ್ರಸಕ್ತ ಹವ್ಯಕ ಮಹಾಸಭೆಯ 83 ವರ್ಷದ ಹುಟ್ಟುಹಬ್ಬದ ಆಚರಣೆಯ ಜೊತೆಗೆ ಸಾಧಕರ ಸಾಧನೆಯ ಸಂಭ್ರಮಾಚರಣೆಯನ್ನೂ ವಿಶೇಷ ಪ್ರಶಸ್ತಿ ಪ್ರದಾನದ ಜೊತೆಗೆ ಮಾಡಲಾಗುತ್ತಿದೆ ಎಂದು ಡಾ। ಗಿರಿಧರ ಕಜೆ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ನಡೆದ 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ - ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಹವ್ಯಕ ಪತ್ರಿಕೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಹವ್ಯಕ’ ಪತ್ರಿಕೆಯು ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳು ಸುಮಾರು 30,000 ಕುಟುಂಬವನ್ನು ತಲುಪುತ್ತಿದೆ. ಆ ಮೂಲಕ ಸಂಘಟನೆ ಹಾಗೂ ಸಮಾಜದ ನಡುವೆ ಕೊಂಡಿಯಾಗಿ ‘ಹವ್ಯಕ’ ಪತ್ರಿಕೆಯು ಸಮಾಜ ಹಾಗೂ ಸಂಘಟನೆಯ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ಕೆಲವು ಸಮಯ ಹವ್ಯಕ ಪತ್ರಿಕೆಯ ಸಂಪಾದಕನಾಗಿ ಸೇವೆ ಸಲ್ಲಿಸುವ ಅವಕಾಶ ನನಗೂ ಸಿಕ್ಕಿತ್ತು. ಪತ್ರಿಕೆಯ ಸಾರ್ಥಕ ಪಯಣದಲ್ಲಿ ಜೊತೆಯಾದ ಎಲ್ಲಾ ಸಂಪಾದಕರು ಹಾಗೂ ಸಂಚಾಲಕರು ಸಮಾಜದ ಅಭಿನಂದನೆಗೆ ಭಾಜನರು ಎಂದರು.

ಹವಿಗನ್ನಡವು ಸಂರಕ್ಷಿತವಾಗಲಿ:

ಕರ್ನಾಟಕ ಸರ್ಕಾರವು ಈ ಸಾಲಿನ ಆಯವ್ಯಯ ಪತ್ರದಲ್ಲಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಿರುವುದನ್ನು ಸ್ವಾಗತಿಸಿದ ಡಾ.ಕಜೆ, ಸಿಎಂ ಸಿದ್ದರಾಮಯ್ಯ ಹಾಗೂ ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ಧನ್ಯವಾದ ಸಮರ್ಪಿಸಿದರು. 2024ರ ಡಿಸೆಂಬರ್‌ನಲ್ಲಿ‌ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ರವಿಶಂಕರ್ ಕೆ.ಭಟ್ ಈ ವಿಷಯವನ್ನು ಪ್ರಸ್ತಾಪಿಸಿದರು. ಫೆಬ್ರವರಿಯಲ್ಲಿ ಮಹಾಸಭೆಯ ಮನವಿಯ ಮೇರೆಗೆ ವಿಶ್ವೇಶ್ವರ ಭಟ್ಟರು ಸಿಎಂಗೆ ಕೋರಿಕೆಯನ್ನು ಸಲ್ಲಿಸಿದ್ದರು. ಇದೀಗ ಸರ್ಕಾರವು ಭಾಷಾ ಅಕಾಡೆಮಿ ಸ್ಥಾಪಿಸುತ್ತಿರುವುದು ಅಭಿನಂದನೀಯವಾಗಿದ್ದು, ಭಾಷಾ ಶ್ರೀಮಂತಿಕೆಯಿಂದ ಕೂಡಿದ ವಿಶಿಷ್ಟ ಭಾಷೆ ಹವಿಗನ್ನಡವು ಸಂರಕ್ಷಿತವಾಗಲಿ ಎಂದರು.

ಹಿರಿಯ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ''''''''ಹವ್ಯಕ'''''''' ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಿದರು.

ಕರ್ಣಾಟಕ ಬ್ಯಾಂಕಿನ ಸಿಒಒ ಬಿ.ಎಸ್.ರಾಜ, ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಆರ್ಥಿಕ ತಜ್ಞ ಗೋಪಾಲಕೃಷ್ಣ ಹೆಗಡೆ ಹುಕ್ಲುಮಕ್ಕಿ ಮಾತನಾಡಿದರು.

ಸಂಚಿಕೆ ಲೋಕಾರ್ಪಣೆ:

ಹವ್ಯಕ ಮಹಾಸಭೆಯ ಮುಖವಾಣಿ ''''''''ಹವ್ಯಕ'''''''' ಪತ್ರಿಕೆಯು ನಿರಂತರವಾಗಿ 60 ವರ್ಷಗಳಿಂದ ಪ್ರಕಾಶಿತವಾಗುತ್ತಿದೆ. ಪ್ರತಿ ತಿಂಗಳು ಸುಮಾರು 30,000 ಕುಟುಂಬಗಳನ್ನು ತಲುಪುತ್ತಿದ್ದು, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ವಜ್ರಮಹೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರತರಲಾಗಿದ್ದು, ಸಂಚಿಕೆಯ ಲೋಕಾರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಪತ್ರಿಕೆಯ ಮಾಜಿ ಹಾಗೂ ಪ್ರಸ್ತುತ ಸಂಪಾದಕರು ಹಾಗೂ ಸಂಚಾಲಕರಿಗೆ ಗೌರವಿಸಲಾಯಿತು.

ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕೃತರು:

ಹವ್ಯಕ ವಿಭೂಷಣ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಸ್.ಶಂಭು ಭಟ್ ಕಡತೋಕ,

ಹವ್ಯಕ ಭೂಷಣ: ನೀರ್ನಳ್ಳಿ ಗಣಪತಿ, ಡಾ.ವೈ.ವಿ.ಕೃಷ್ಣಮೂರ್ತಿ, ಉಮೇಶ ಬಂದಗದ್ದೆ,

ಹವ್ಯಕ ಶ್ರೀ: ಪೂರ್ಣಿಮಾ ಕೆ ಭಟ್, ವೇ. ಮೂ. ಸುಚೇತನ ಭಟ್ ಘನಪಾಠಿ, ಆನಂದ ಹೆಗಡೆ ಶೀಗೇಹಳ್ಳಿ, ಕು. ಪ್ರತ್ಯೂಷ ಕುಮಾರ್, ಹವ್ಯಕ ಸೇವಾಶ್ರೀ: ಡಾ.ಬಿ.ವಿ.ನರಹರಿ ರಾವ್, ಬೋನಂತಾಯ ಶಿವಶಂಕರ ಭಟ್, ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ.