ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಪ್ರಶಸ್ತಿ-ಇನಾಮದಾರ

| Published : May 09 2025, 12:33 AM IST

ಸಾರಾಂಶ

ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ, ಪ್ರಶಂಸಿ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ ತಾಲೂಕಿನ ಕೃಷ್ಣಮ್ಮ ಹಾದಿಮನಿ ಅವರಿಗೆ ಈ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

ನರಗುಂದ: ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ, ಪ್ರಶಂಸಿ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ ತಾಲೂಕಿನ ಕೃಷ್ಣಮ್ಮ ಹಾದಿಮನಿ ಅವರಿಗೆ ಈ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರಭಾರ ಸಹಾಯಕ ನಿರ್ದೇಶಕ (ಪಂ.ರಾಜ್) ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ಕೃಷ್ಣಮ್ಮ ಹಾದಿಮನಿಯವರನ್ನು ಸನ್ಮಾನಿಸಿ, ಗೌರವಿಸಿ ಆನಂತರ ಮಾತನಾಡಿ, ಪ್ರತಿ ವರ್ಷ ಸರ್ಕಾರದಿಂದ ತಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿರುವ ನೌಕರರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ನರಗುಂದ ತಾಲೂಕಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಕೃಷ್ಣಮ್ಮ ಹಾದಿಮನಿ ಅವರ ಕಾರ್ಯನಿರ್ವಹಣೆ ಸಿಕ್ಕ ಫಲವಾಗಿದೆ. ಇದು ಇತರೆ ನೌಕರರಿಗೆ ಮಾದರಿಯಾಗಿದೆ ಎಂದರು. ಸರ್ಕಾರಿ ನೌಕರರು ಸಾರ್ವಜನಿಕರ ಕುಂದುಕೊರತೆಗಳಿಗೆ ಸಕಾಲಕ್ಕೆ ಸ್ಪಂದಿಸಿ, ಇತ್ಯರ್ಥಪಡಿಸಿದಲ್ಲಿ ಮಾತ್ರ ತಮ್ಮ ಕರ್ತವ್ಯದಲ್ಲಿ ಸಾರ್ಥಕತೆ ಪಡೆಯಬಹುದಾಗಿದೆ. ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವ ಬಿಟ್ಟು ಜನಸ್ನೇಹಿ ಆಡಳಿತ ಒದಗಿಸಬೇಕು ಎಂದು ಹೇಳಿದರು. ತಾಲೂಕಿನಲ್ಲಿ ಎಲ್ಲರೂ ದಕ್ಷತೆ ಮತ್ತು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕೆಲಸ ಮಾಡಿದಾಗ ಮಾತ್ರ ಇಂತಹ ಪ್ರಶಸ್ತಿಗಳು ದೊರಕಲು ಸಾಧ್ಯ. ಎಲ್ಲರೂ ಇದೇ ತರಹ ಕಾರ್ಯನಿರ್ವಹಿಸಿ, ಪ್ರಶಸ್ತಿ ಪಡೆಯುವಂತರಾಗಿ ಜೊತೆಗೆ ಗ್ರಾಮ ಅಭಿವೃದ್ಧಿಯ ಮತ್ತು ತಾಲೂಕು ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಕೃಷ್ಣಮ್ಮ ಹಾದಿಮನಿ ಮಾತನಾಡಿ, ಮೇಲಧಿಕಾರಿಗಳ ಮಾರ್ಗದರ್ಶನ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಉತ್ತಮ ಕಾರ್ಯನಿರ್ವಹಿಸಿದ ಫಲದಿಂದ ಈ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತಸ ತಂದಿದೆ, ಜೊತೆಗೆ ಈ ಪ್ರಶಸ್ತಿ ಪಡೆದ ಮೇಲೆ ಇನ್ನಷ್ಟು ಜವಾಬ್ದಾರಿ ಹಾಗೂ ಹೊಣೆಗಾರಿಕೆ ಹೆಚ್ಚಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ, ತಾಪಂ, ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.