ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಪ್ರತಿಯೊಬ್ಬ ನಾಗರಿಕರಿಗೆ ಅದರಲ್ಲೂ ಪ್ರಮುಖವಾಗಿ ಯುವ ಜನಾಂಗಕ್ಕೆ ಎಚ್ಐವಿ ಸೋಂಕು ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಎಚ್ಐವಿ ಸೋಂಕಿತರು ಯಾವುದೇ ರೀತಿಯ ಆತಂಕ, ಭಯಪಡಬೇಕಾಗಿಲ್ಲ. ಅವರು ಸರಿಯಾದ ಜೀವನ ಕ್ರಮ ಮತ್ತು ಸದೃಢ ಮನೋಭಾವನೆ ಬೆಳೆಸಿಕೊಂಡರೇ ಅವರೂ ಜನಸಾಮಾನ್ಯರ ಹಾಗೆ ಬದುಕಬಹುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು.ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್, ಎನ್.ಸಿ.ಸಿ, ಸ್ಕೌಟ್ಸ್ ಆಂಡ್ ಗೈಡ್ಸ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಘಟಕ ಹಾಗೂ ಸಾರ್ವಜನಿಕ ಆಸ್ಪತ್ರೆ ಮುಧೋಳ, ಎಸ್.ಆರ್.ಕಂಠಿ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯುವಕರು ತಮ್ಮ ಕ್ಷಣಿಕ ಸುಖಕ್ಕಾಗಿ ಇಡೀ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳಲಾರದೇ ಸನ್ಮಾರ್ಗದಲ್ಲಿ ನಡೆಯುವ ಕಾರ್ಯ ಆಗಬೇಕು. ಎಚ್.ಐ.ವಿ ಇದೇನು ಭಯಾನಕ ರೋಗವಲ್ಲ, ಅದನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಇದರ ಬಗ್ಗೆ ತಿಳಿವಳಿಕೆ ಬೇಕಾಗಿದೆ ಎಂದರು.
ಎಚ್.ಐ.ವಿ ಸೋಂಕು ಬಾರದಂತೆ ಮುನ್ನಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ. ಅಪರಚಿತ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಮಾಡಬೇಕಾದರೆ ಕಾಂಡೋಮ್ ಗಳನ್ನು ಬಳಸಬೇಕು. ರಕ್ತ ವನ್ನು ಕೊಡುವುದು ಅಥವಾ ಪಡೆದುಕೊಳ್ಳುವಾಗ ಎಚ್ಚರ ವಹಿಸಬೇಕು. ರಕ್ತ ತಪಾಸಣೆ ತಪ್ಪದೇ ಮಾಡಬೇಕು. ಒಟ್ಟಾರೆ ಸುರಕ್ಷಿತ ಸಂಪರ್ಕ ಬಹಳ ಮುಖ್ಯವಾಗಿದೆ ಎಂದು ಹೇಳಿದ ಅವರು, ಎಚ್.ಐ.ವಿ ಸೋಂಕಿತರು ಭಯ ಪಡದೇ ಯೋಗಿಯಂತೆ ಎಲ್ಲವನ್ನು ತ್ಯಾಗ ಮಾಡಿ, ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಂಡರೆ ಸಾಕಷ್ಟು ವರ್ಷ ಬದುಕಬಹುದು ಎಂದರು.ಪ್ರಾಚಾರ್ಯ ಪ್ರೊ.ಎಮ್.ವಿ.ಜಿಗಬಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ, ಮೊಬೈಲ್ನಲ್ಲಿ ಬರುವ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಯುವ ಜನಾಂಗ ದಾರಿ ತಪ್ಪುವ ಸಾಧ್ಯತೆಗಳಿವೆ. ಅದರಲ್ಲೂ ಕಾಲೇಜಿನ ವಿದ್ಯಾರ್ಥಿಗಳು ತಪ್ಪು ಹೆಜ್ಜೆ ಇಡುವ ಮುನ್ನ ಹತ್ತಾರು ಸಲ ವಿಚಾರಮಾಡಬೇಕೆಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ಐಕ್ಯೂಎಸಿ ಸಂಯೋಜಕಿ ಪ್ರೊ.ಶಾರದಮ್ಮ ಬಿರಾದಾರ, ವಿವಿಧ ಘಟಕಗಳ ಅಧಿಕಾರಿಗಳಾದ ವ್ಹಿ.ಎಂ.ಕಿತ್ತೂರ, ಡಾ.ಲೋಕೇಶ ರಾಠೋಡ, ಡಾ.ಎಂ.ಕೆ.ಗವಿಮಠ, ಪಿ.ಡಿ.ಕುಂಬಾರ, ಎ.ವೈ.ಮುನ್ನೊಳ್ಳಿ, ಎಸ್.ಬಿ.ಮೇಟಿ ವೇದಿಕೆ ಮೇಲೆ ಇದ್ದರು. ಪ್ರೊ.ಪಿ.ಡಿ.ಕುಂಬಾರ ಸ್ವಾಗತಿಸಿದರು. ಡಾ.ರವೀಂದ್ರ ಕತ್ತಿ ನಿರೂಪಿಸಿದರು. ಪ್ರೊ.ವ್ಹಿ.ಎಂ.ಕಿತ್ತೂರ ವಂದಿಸಿದರು.ವಿದ್ಯಾರ್ಥಿನಿಯರಾದ ರುಚಿತಾ ಹುಂಡೇಕರ ಮತ್ತು ದಿವ್ಯಾ ಪೂಜಾರಿ ಪ್ರಾರ್ಥನೆ ಹೇಳಿದರು.