ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಅಣ್ವಸ್ತ್ರ ಮತ್ತು ಕ್ಷಿಪಣಿ ದಾಳಿಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಬೇಕಾದರೆ ಪ್ರತಿಯೊಬ್ಬ ಸೈನಿಕನು ತನ್ನ ಶರೀರವನ್ನು ಸದೃಢ ಹಾಗೂ ಆರೋಗ್ಯವಂತವಾಗಿ ಇಟ್ಟುಕೊಳ್ಳಬೇಕು ಎಂದು ನಿವೃತ್ತ ಸುಬೇದಾರ್ ಪ್ರಸನ್ನ ಬಿ ಹೇಳಿದ್ದಾರೆ. ಕರ್ನಾಟಕ ಸಂಘ, ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘ ಆಶ್ರಯದಲ್ಲಿ ಭಾನುವಾರ ಪುತ್ತೂರಿನ ಅನುರಾಗ ವಠಾರದಲ್ಲಿ ‘ಯುದ್ಧ ಸಂದರ್ಭದಲ್ಲಿ ಶತ್ರು ರಾಷ್ಟ್ರ ಅಣ್ವಸ್ತ್ರ ಪ್ರಯೋಗಿಸಿದರೆ ಆ ಸಮಯ ಅದರಿಂದಾಗುವ ಜೀವಹಾನಿಯಿಂದ ಪಾರಾಗುವ ಹಾಗೂ ಮುಂಜಾಗ್ರತೆ ವಹಿಸುವ ಬಗ್ಗೆ’ ನಡೆದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ನಾಗರಿಕನೂ ದೇಶದ ಸೈನ್ಯದ ಬಗ್ಗೆ ತಿಳಿದುಕೊಳ್ಳಬೇಕು. ಯುದ್ಧಕ್ಕೆ ತೆರಳಬೇಕಾದ ಸೈನಿಕರ ಅರೋಗ್ಯ ತಪಾಸಣೆ ಮಾಡಲಾಗುತ್ತದೆ, ಮಧುಮೇಹ ಬಿಪಿ ಅಥವಾ ಇನ್ನಿತರ ಯಾವುದೇ ಕಾಯಿಲೆ ಇಲ್ಲದ ಸೈನಿಕರನ್ನು ಮಾತ್ರ ಯುದ್ಧಕ್ಕೆ ಕಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಸೈನ್ಯದಲ್ಲಿ ಸೈನಿಕರು ತಮಗೆ ತೋಚಿದಂತೆ ಯಾವುದೇ ಕೆಲಸವನ್ನು ಮಾಡುವಂತಿಲ್ಲ, ಮೇಲಧಿಕಾರಿಗಳ ಆದೇಶದಂತೆ ಕೆಲಸ ನಿರ್ವಹಿಸಬೇಕಾಗುತ್ತದೆ, ಆದ್ದರಿಂದ ಕಾರ್ಮಿಕರೂ ಕೂಡ ಗಟ್ಟಿ ಮುಟ್ಟಾದ ಸದೃಢ ದೇಹ ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ಕಾರ್ಮಿಕರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೆಪಿಸಬೇಕು. ಸೈನ್ಯಕ್ಕೆ ಸೇರಿದ್ದಲ್ಲಿ ತಮ್ಮ ಮನೆಯ ವಾತಾವರಣವೇ ಧನಾತ್ಮಕವಾಗಿ ಬದಲಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷರಾದ ಬಿ ಪುರಂದರ ಭಟ್ ಮಾತನಾಡಿ ಪ್ರತಿಯೊಬ್ಬ ಕಾರ್ಮಿಕನೂ ಸದೃಢ ದೇಹ ಹೇಗೆ ಇಟ್ಟುಕೊಳ್ಳಬೇಕು ಹಾಗೇ ಸದೃಢವಾದ ಮನೆಯನ್ನು ಕಟ್ಟಿಕೊಳ್ಳಬೇಕು. ಯಾಕೆಂದರೆ ನಮ್ಮ ಶತ್ರು ರಾಷ್ಟ್ರ ಪಾಕಿಸ್ಥಾನವು ಯುದ್ಧ ಸಂದರ್ಭದಲ್ಲಿ ಅಣ್ವಸ್ತ್ರ ಅಥವಾ ವಿಷಾನಿಲ ದಾಳಿ ಮಾಡಿದರೆ ಅದರಿಂದಾಗುವ ಪ್ರಾಣ ಹಾನಿಯನ್ನು ತಪ್ಪಿಸಲು ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಆದರೂ ಬೆಳಕು ನಿರೋಧಕ ಹಾಗೂ ಗಾಳಿ ನಿರೋಧಕವಾಗಿ ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಬರಬಹುದು, ಆದ್ದರಿಂದ ತಾವೆಲ್ಲರೂ ಜಾಗ್ರತರಾಗಿದ್ದು ಮುಂಬರುವ ದಿನಗಳಲ್ಲಿ ಆಗುವ ಅನಾಹುತದ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ ಎಂದು ಹೇಳಿದರು.ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಪ್ರವಾಸಿಗರಿಗೆ ಹಾಗೂ ಸೈನಿಕರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಮುಕ್ವೆ, ಕಾರ್ಯಧ್ಯಕ್ಷ ಎಂ ಶೇಷಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ಎಂ ಮೋಹನ ಆಚಾರ್ಯ ಪುರುಷರಕಟ್ಟೆ ಇದ್ದರು. ಭಾರತೀಯ ಸೈನ್ಯದ ನಿವೃತ್ತ ಸುಭೇದಾರ್ ಪ್ರಸನ್ನ ಬಿ ಪುತ್ತೂರು ಅವರನ್ನು ಎಲ್ಲಾ ಸಂಘಟನೆಗಳ ಪರವಾಗಿ ಗೌರವಿಸಲಾಯಿತು, ಸಂಘದ ಸಲಹೆಗಾರರಾದ ಕೆ ಜಯರಾಮ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಮ್ ಶೇಷಪ್ಪ ಕುಲಾಲ್ ಸ್ವಾಗತಿಸಿದರು. ಎಮ್ ಮೋಹನ ಆಚಾರ್ಯ ಪುರುಷರಕಟ್ಟೆ ವಂದಿಸಿದರು. ಜಗದೀಶ್ ಕೆ ಕಲ್ಮಡ್ಕ ನಿರ್ವಹಿಸಿದರು.