ಹದಿಹರೆಯದ ಮಕ್ಕಳ ಬಗ್ಗೆ ಜಾಗೃತಿ ಇರಲಿ

| Published : Jan 20 2025, 01:33 AM IST

ಸಾರಾಂಶ

8, 9,10ನೇ ತರಗತಿಯ ವಿದ್ಯಾರ್ಥಿಗಳದ್ದು, ಆಕರ್ಷಣೆಯ ವಯಸ್ಸು. ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಸಮಗ್ರ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆ, ಕುಟುಂಬದವರ ಗಮನವಿರಲಿ. ಮಕ್ಕಳ ಕನಸುಗಳನ್ನು ನನಸು ಮಾಡಿ. ಆದರೆ, ನಿಮ್ಮ ಕನಸುಗಳನ್ನು ಅವರ ಮೇಲೆ ಹೆರಬೇಡಿ.

ಧಾರವಾಡ:

ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ. ಪ್ರೌಢಶಾಲೆಯಲ್ಲಿ ಓದುವ ಮಕ್ಕಳಿಂದ ಹಿಡಿದು ಹದಿಹರೆಯದ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.ಇಲ್ಲಿಯ ಕಮಲಾಪುರದಲ್ಲಿ ಇರುವ ಜ್ಞಾನಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಉದ್ಘಾಟಿಸಿದ ಅವರು, ಆದಷ್ಟು ಮೊಬೈಲ್, ಟಿವಿಗಳಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಆಟ, ಅಧ್ಯಯನ ಅವರಿಗೆ ಪ್ರಥಮ ಆದ್ಯತೆ ಆಗುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಶಿಕ್ಷಣ ಮೌಲ್ಯ ಹೆಚ್ಚಿಸಬೇಕು. ಮಕ್ಕಳ ಮತ್ತು ಪಾಲಕರ ಹಾಗೂ ಶಿಕ್ಷಕಕರ ಮನಸ್ಥಿತಿ ಒಂದಾಗಬೇಕು. ಇದು ಮಕ್ಕಳಲ್ಲಿ ಪರಿಪೂರ್ಣ ಮತ್ತು ಸಮಗ್ರ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಆಟ, ಪಾಠ, ಊಟ ಎಲ್ಲವೂ ಸರಿಯಾದ ಸಮಯಕ್ಕೆ ಆಗಬೇಕು. ಮಕ್ಕಳಿಗೆ ಹದಿ ಹರೆಯದ ವರ್ಷಗಳಲ್ಲಿ ಮಾರ್ಗದರ್ಶನ ಅಗತ್ಯವಾಗಿದೆ. ವಿಶೇಷವಾಗಿ 8, 9,10ನೇ ತರಗತಿಯ ವಿದ್ಯಾರ್ಥಿಗಳದ್ದು, ಆಕರ್ಷಣೆಯ ವಯಸ್ಸು. ಪಾಲಕರು ಎಚ್ಚರಿಕೆ ವಹಿಸಬೇಕು ಎಂದ ಅವರು, ಮಕ್ಕಳ ಸಮಗ್ರ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆ, ಕುಟುಂಬದವರ ಗಮನವಿರಲಿ. ಮಕ್ಕಳ ಕನಸುಗಳನ್ನು ನನಸು ಮಾಡಿ. ಆದರೆ, ನಿಮ್ಮ ಕನಸುಗಳನ್ನು ಅವರ ಮೇಲೆ ಹೆರಬೇಡಿ ಎಂಬ ಸಲಹೆ ನೀಡಿದರು.

ಪ್ರತಿ ಮಗುವಿಗೆ ಆಧುನಿಕತೆ ಪಾಠ ಕಲಿಸಿ. ಟಿವಿ, ಮೊಬೈಲ್‌ ಬದಲಿಗೆ, ಅವರಲ್ಲಿ ಪುಸ್ತಕ ಓದುವ ಹುಚ್ಚು ಬೆಳೆಸಿ. ನಿಮ್ಮ ಮಗುವಿನ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ. ಮಗುವಿಗೆ ಉತ್ತಮ ಜೀವನ ಕಲ್ಪಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಪ್ರತಿ ಮಗು ಚೆನ್ನಾಗಿರುತ್ತದೆ. ನಾವು ಮನೆ ವಾತಾವರಣ ಉತ್ತಮವಾಗಿರುವಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಅನುಭವದ ಮಾತು ಇರಬೇಕು. ಅಂದಾಗ ಅವರಿಗೆ ಸನ್ಮಾರ್ಗ ಕಾಣುತ್ತದ ಎಂದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ, ಶಹರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಜಿಲ್ಲಾ ಸಹಾಯಕ ವಾರ್ತಾಧಿಕಾರಿ ಡಾ. ಎಸ್.ಎಂ. ಹಿರೇಮಠ, ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಅಡವೇರ, ಅಶ್ವಿನಿ ಅಳಟಗಿ ನಾಯಕ್ ಭಾಗವಹಿಸಿದ್ದರು. ಜ್ಞಾನ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುತ್ರಯ್ಯ ರುದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಂಗಯ್ಯ ಠಾಣಯ್ಯ ಹಿರೇಮಠ ಇದ್ದರು. ಪ್ರಾಚಾರ್ಯರಾದ ಗಿರಿಜಾ ಹೊಟ್ಟಿ ವಾರ್ಷಿಕ ವರದಿ ಮಂಡಿಸಿದರು. ಐಟಿಐ ಕಾಲೇಜು ಪಾಚಾರ್ಯ ಮೊಹಮ್ಮದ್‌ ಅಬ್ಬಾಸ ಸದರಬಾಯಿ ವಂದಿಸಿದರು. ಶಿಕ್ಷಕಿ ಅಫ್ರೀನ್ ಭಾನು ಗುಳಗುಂಡಿ ಹಾಗೂ ಶ್ರುತಿ ವಾಲಿ ನಿರೂಪಿಸಿದರು.