ಯುವ ಮತದಾರರ ಸೇರ್ಪಡೆಗೆ ಜಾಗೃತಿ ಅಗತ್ಯ

| Published : Dec 23 2023, 01:46 AM IST

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024, ಯುವ ಮತದಾರರ ನೋಂದಣಿ ಸಂಬಂಧ ಹೊಸಪೇಟೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಯುವ ಮತದಾರರ ನೋಂದಣಿ ಹಾಗೂ ಮತದಾನ ಪ್ರಕ್ರಿಯೆ ಹಾಗೂ ಜಿಲ್ಲೆಯ ಸ್ವೀಪ್ ಚಟುವಟಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕವು ವಿಶೇಷ ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಹೊಸಪೇಟೆ: ಮತದಾರರ ಪಟ್ಟಿಯಲ್ಲಿ ಯುವ ಮತದಾರರನ್ನು ಸೇರ್ಪಡೆ ಮಾಡಲು ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಹೇಳಿದರು.ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024, ಯುವ ಮತದಾರರ ನೋಂದಣಿ ಸಂಬಂಧ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಹೊಸ ಮತದಾರರಿಗೆ ಆದ್ಯತೆ ನೀಡಬೇಕು. ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ ಎಲ್ಲ ಯುವ ಮತದಾರರನ್ನು ನೋಂದಾಯಿಸಬೇಕು. ಹಾಗೆಯೇ ಮನೆ, ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ಮತದಾರರ ಹೆಸರು ಸೇರ್ಪಡೆಗೆ ಮುಂದಾಗಬೇಕು. ವಲಸಿಗರು, ಆದಿವಾಸಿಗಳು, ಕಾರ್ಮಿಕರು, ವಿಶೇಷಚೇತನರು ಹೀಗೆ ಅರ್ಹ ಮತದಾರರ ಬಗ್ಗೆ ಗಮನಹರಿಸಬೇಕು. ಮತದಾನದ ಹಕ್ಕನ್ನು ಚಲಾಯಿಸುವ ಮಹತ್ವದ ಬಗ್ಗೆಯೂ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಯುವ ಮತದಾರರ ನೋಂದಣಿ ಹಾಗೂ ಮತದಾನ ಪ್ರಕ್ರಿಯೆ ಹಾಗೂ ಜಿಲ್ಲೆಯ ಸ್ವೀಪ್ ಚಟುವಟಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕವು ವಿಶೇಷ ಜಾಗೃತಿ ಮೂಡಿಸಿ. ಮತದಾರರ ನೋಂದಣಿ ಮತ್ತು ಮತದಾನದ ಮೂಲಕ ಚುನಾವಣಾ ಭಾಗವಹಿಸುವಿಕೆ ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಕಚೇರಿಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಎಲ್ಲ ನೌಕರರ ಹೆಸರಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಎಲ್ಲರಿಗೂ ವೋಟರ್ ಹೆಲ್ಪ್‌ಲೈನ್‌ ಆ್ಯಪ್, ಸಹಾಯವಾಣಿ ಸಂಖ್ಯೆ: 1950ರ ಅರಿವು ಮೂಡಿಸಬೇಕು ಎಂದು ಹೇಳಿದರು.ಜಿಪಂ ಸದಾಶಿವ ಪ್ರಭು ಬಿ. ಮಾತನಾಡಿ, ವಿಶೇಷ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಬಿಎಲ್‌ಒಗಳು ಮನೆ, ಮನೆ ಭೇಟಿ, ಮತದಾರರ ಜಾಗೃತಿ ಕ್ಲಬ್‌ಗಳಿಂದ, ಎನ್ಆರ್‌ಎಲ್‌ಎಂ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ವಿಶೇಷ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಹಾಗೂ ಮಹಿಳಾ ಸದಸ್ಯರಿಂದ ಮನೆ, ಮನೆ ಭೇಟಿ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ 6 ತಾಲೂಕಿನ 137 ಗ್ರಾಪಂಗಳಲ್ಲಿ ಕಸ ವಿಲೇವಾರಿ ವಾಹನಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.