ಭಾರತದಲ್ಲಿ ಯುವಕರ ಗುರಿಯಾಗಿಸಿ ಮಾದಕ ವಸ್ತುಗಳನ್ನು ವಿತರಿಸುತ್ತಿರುವುದು ಖಂಡನೀಯ ಎಂದು ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ ಹೇಳಿದ್ದಾರೆ.

ಮಲೇಬೆನ್ನೂರು: ಭಾರತದಲ್ಲಿ ಯುವಕರ ಗುರಿಯಾಗಿಸಿ ಮಾದಕ ವಸ್ತುಗಳನ್ನು ವಿತರಿಸುತ್ತಿರುವುದು ಖಂಡನೀಯ ಎಂದು ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ ಹೇಳಿದರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವರಬೆಕೆರೆ ಮೈಲಾರಲಿಂಗೆಶ್ವರ ಪ್ರೌಢಶಾಲೆ ಮತ್ತು ಬನ್ನಿಕೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಪ್ರವಾಸಿ ತಾಣಗಳಾದ ಉಡುಪಿ, ದಕ್ಷಿಣ ಕನ್ನಡ, ಹಂಪಿ, ಮಂಗಳೂರು, ಗೋಕರ್ಣ, ಧಾರವಾಡ, ಮುರ್ಡೇಶ್ವರದಂಥ ಧಾರ್ಮಿಕ ಕ್ಷೇತ್ರಗಳಲ್ಲೂ ವಿದೇಶಿ ಪೆಡ್ಲರ್‌ಗಳಿಂದ ಮಾದಕ ವಸ್ತುಗಳು ಮಾರಾಟ ಆಗುತ್ತಿವೆ. ಭಾರತವನ್ನು ವೀಕ್ ಮಾಡಲು ಬರ್ಮಾ, ಆಫ್ಘಾನಿಸ್ಥಾನ, ಥೈಲ್ಯಾಂಡ್, ಮತ್ತು ನೇಪಾಳ ರಾಷ್ಟ್ರಗಳು ಸುಂದರವಾದ ಯುವತಿಯರ ಮೂಲಕ ಯುವಕರ ಗುರಿಯಾಗಿಸಿ ಮಾದಕ ವಸ್ತುಗಳನ್ನು ವಿತರಿಸುತ್ತಿರುವುದು ಕಂಡುಬಂದಿದೆ. ಇದರ ವಿರುದ್ಧ ಭಾರತೀಯರು ಜಾಗೃತರಾಗಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ೧೮೨೮ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾದ ಲಕ್ಷಾಂತರ ಮದ್ಯವ್ಯಸನಿಗಳಲ್ಲಿ ೧.೧೯.೦೦೦ ಲಕ್ಷ ಕುಡುಕರು ಮದ್ಯವ್ಯಸನ ತೊರೆದು ನವಜೀವನ ನಡೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಮೇಲ್ವಿಚಾರಕ ಮಾರುತಿ ಮಾತನಾಡಿ ಯೋಜನೆಯಲ್ಲಿ ೨೮ಕ್ಕೂ ಹೆಚ್ಚು ಕಾರ್ಯಕ್ರಮಗಳಿವೆ, ಮಹಿಳೆಯರು ಹೊಸ ಮಾಹಿತಿ ತಿಳಿಯಲು ಆಸಕ್ತಿ ಇರಲಿ ಎಂದರು.

ಉಪ ಪ್ರಾಚಾರ್ಯ ಕೊಟ್ರೇಶ್, ಮುಖ್ಯ ಶಿಕ್ಷಕ ವಿಜಯಕುಮಾರ್ ಓಲೇಕಾರ್, ಶಿಕ್ಷಕ ಹೂಗಾರ್, ಮಾರುತಿ, ಯಶೋಧಾ, ಸೇವಾ ಪ್ರತಿನಿಧಿ ವಿನುತಾ, ವೀಣಾ, ರೂಪ ಹಾಜರಿದ್ದರು.

- - -

-ಚಿತ್ರ-೧: ಬನ್ನಿಕೋಡು ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.