ಸಾರಾಂಶ
ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್.ಎಲ್.ಎಚ್.ಪಿ) ಮತ್ತು ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ವತಿಯಿಂದ ಶಾಂತಿನಗರದಲ್ಲಿ ಸರ್ಕಾರಿ ಯೋಜನೆ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾನತಾಡಿ, ಈ ಅಭಿಯಾನ ಹೆಚ್ಚಿನ ಜನರಿಗೆ ತಲುಪುವುದರೊಂದಿಗೆ ಜನರು ಇದರ ಸದುಪಯೋಗ ಪಡಿಸಿಕೊಳ್ಳಲಿ ಮತ್ತು ಹೆಚ್ಚಿನ ಜನರು ಈ ಸೌಲಭ್ಯಗಳಿಗೆ ನೋಂದಾಯಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲಿ ಎಂದರು.ಸಂಸ್ಥೆಯಿಂದ ಇಂತಹ ಹೆಚ್ಚಿನ ಕಾರ್ಯಕ್ರಮಗಳು ನಡೆದರೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್. ವೀಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಟಿ. ಯೋಗೇಶ್, ನಗರ ಪಾಲಿಕೆಯ ಡೇ- ಎನ್.ಯು.ಎಲ್.ಎಂ ಅಭಿಯಾನದ ವ್ಯವಸ್ಥಾಪಕ ಡಾ. ಬೈರಲಿಂಗಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೈಸೂರು ಇದರ ಉತ್ತರ ವಲಯ ಬಿಇಒ ಎಸ್. ರೇವಣ್ಣ ಹಾಗೂ ಮೇವಾ ಎಜುಕೇಶನ್ ಸಂಸ್ಥೆ ಕಾರ್ಯದರ್ಶಿ ಶೇಕ್ ಅಬ್ದುಲ್ ನವಾಫ್ ಇದ್ದು, ತಮ್ಮ ಇಲಾಖೆಯಲ್ಲಿ ಮಕ್ಕಳಿಗೆ ಯುವಜನರಿಗೆ ಮತ್ತು ವಯಸ್ಕರಿಗೆ ಇರುವಂತ ವಿವಿಧ ಯೋಜನೆಗಳು ಮತ್ತು ಅದನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ತಿಳಿಸಿದರು.ತಮ್ಮ ಇಲಾಖೆಗೆ ಸಂಬಂಧಿಸಿ ಜನರಿಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ನೇರವಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಂಸ್ಥೆಯ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದ ಮೂಲಕ ಆರ್.ಎಲ್.ಎಚ್.ಪಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಷ್ಮಾನ್ ಕಾರ್ಡ್, ಈ- ಶ್ರಮಕಾರ್ಡ್, ಲೇಬರ್ ಕಾರ್ಡ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನೀಡಲಾಗುವ ಪೋಷಕತ್ವ ಯೋಜನೆ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 22 ದಿನಗಳು ವಾಹನದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ, ಜೆ.ಎಸ್.ಎಸ್ ಸಮುದಾಯ ಬಾನುಲಿ ಕೇಂದ್ರ 91.2 ಎಫ್.ಎಂ ಕೇಂದ್ರದ ಮೂಲಕ ಜಾಗೃತಿ ಕಾರ್ಯಕ್ರಮ, ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಮೂಲಕ 3.5 ಲಕ್ಷಕ್ಕೂ ಅಧಿಕ ಜನರಿಗೆ ತಲುಪುವುದಾಗಿ ನಿರೀಕ್ಷಿಸಲಾಗಿದೆ ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಈ ಸೌಲಭ್ಯಗಳಿಗೆ ನೋಂದಾಯಿಸುವ ಸೌಕರ್ಯ ಈ ಅಭಿಯಾನದ ಸಂದರ್ಭದಲ್ಲಿ ಮಾಡಲಾಗುವುದು ಎಂದರು.ಜನಸಂಪರ್ಕ ಮೇಳ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸಂಬಂಧಿಸಿದ ಆಯಾ ಇಲಾಖೆ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಸೌಲಭ್ಯಗಳಿಂದ ವಂಚಿತರಾದ ಸಮುದಾಯದ ಜನರಿಗೆ ಎಲ್ಲಾ ಸೇವೆಯನ್ನು ಒಂದೇ ಸೂರಿನ ಕೆಳಗೆ ಸಿಗುವಂತೆ ಮಾಡಲಾಗುವುದು ಹಾಗೂ ಸಮುದಾಯದ ಜನರು ಸ್ಥಳೀಯವಾಗಿ ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಕುರಿತು ಬರುವ ಅಧಿಕಾರಿಗಳೊಂದಿಗೆ ಚರ್ಚಿಸುವುದರೊಂದಿಗೆ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಗಮನ ಹರಿಸಲಾಗುವುದು ಎಂದರು.
ಆರ್.ಎಲ್.ಎಚ್.ಪಿ ಕಾರ್ಯದರ್ಶಿ ವಿ.ಕೆ. ಜೋಶ್ ಅಧ್ಯಕ್ಷತೆ ವಹಿಸಿದ್ದರು.ಸುಮಾರು 150ಕ್ಕೂ ಹೆಚ್ಚು ಸಮುದಾಯ ಜನರು ಭಾಗವಹಿಸಿದರು, ಸಂಸ್ಥೆ ಸಿಬ್ಬಂದಿ ಇದ್ದರು.