ಪ್ರತಿಯೊಬ್ಬ ನಾಗರಿಕ ತನ್ನ ಹಕ್ಕುಗಳ ಜತೆಗೆ ಕರ್ತವ್ಯ ಅರಿತುಕೊಳ್ಳಬೇಕು.
ಕೊಪ್ಪಳ: ಸಮಾಜದಲ್ಲಿ ಸಾಮಾಜಿಕ ಸಮಾನತೆ, ಹಕ್ಕುಗಳ ರಕ್ಷಣೆ ಹಾಗೂ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸಾಮಾಜಿಕ ನ್ಯಾಯ ಅತ್ಯಂತ ಅಗತ್ಯ, ಅಧಿಕಾರಿಗಳು ಕಚೇರಿ ಸಿಬ್ಬಂದಿ ಸಮಾನ ರೀತಿಯಲ್ಲಿ ಕಾಣಬೇಕು. ನಾವು ಸಾಮಾಜಿಕ ಸಮಾನತೆಯ ಜತೆಗೆ ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಪ್ರಾಯೋಜಕತ್ವದಲ್ಲಿ, ಜಿಲ್ಲಾಡಳಿತ ಹಾಗೂ ಜಿಪಂ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ನಾಗರಿಕ ತನ್ನ ಹಕ್ಕುಗಳ ಜತೆಗೆ ಕರ್ತವ್ಯ ಅರಿತುಕೊಳ್ಳಬೇಕು.ಸಾಮಾಜಿಕ ನ್ಯಾಯವೆಂದರೆ ಕೇವಲ ಕಾನೂನಿನ ಅಂಶವಲ್ಲ,ಅದು ಸಮಾಜದ ಪ್ರಗತಿಗೆ ಮೂಲಭೂತ ಸ್ಥಂಭವಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ತಿಳಿಸಬೇಕು ಎಂದರು.
ಗದಗಿನ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಪಾಪಣ್ಣ ಐ.ಜಿ ಮಾತನಾಡಿ, ಸುಸ್ಥಿರ ಸಮಾಜ, ಸಾಮಾಜಿಕ ನ್ಯಾಯದ ಮಹತ್ವ ಮತ್ತು ಪರಿಕಲ್ಪನೆ ಕುರಿತು ಹಾಗೂ ಸಮಾಜದಲ್ಲಿನ ಜಾತಿ, ಲಿಂಗ, ಧರ್ಮ ಮತ್ತು ವರ್ಗ ಆಧಾರಿತ ಭೇದಭಾವ ನಿವಾರಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಆರ್ಥಿಕ ಅವಕಾಶ ದೊರೆಯಬೇಕು ಎಂಬುದು ಆರ್ಥಿಕ ನ್ಯಾಯದ ಮೂಲ ತತ್ವ, ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು,ಸಮಾನ ರಾಜಕೀಯ ಭಾಗವಹಿಸುವಿಕೆ ಹಾಗೂ ಆಡಳಿತದಲ್ಲಿ ಪ್ರತಿನಿದಿತ್ವ ಸಿಗುವುದು ರಾಜಕೀಯ ನ್ಯಾಯದ ಮೂಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಸಂವಿಧಾನ ನೀಡಿರುವ ಹಕ್ಕು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989ರ ಇತ್ತೀಚಿನ ತಿದ್ದುಪಡಿ ಮತ್ತು ಸಂವಿಧಾನದ 17ನೇ ವಿಧಿ,ಮಕ್ಕಳ ಹಕ್ಕುಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012, ಭಾರತ ಸಂವಿಧಾನದ ಭಾಗ-3ರಲ್ಲಿ ಅನುಚ್ಛೇದ 12 ರಿಂದ 35 ರವರೆಗೆ ಮೂಲಭೂತ ಹಕ್ಕು, ಭಾಗ-4 ರಲ್ಲಿ (ಎ) ಅನುಚ್ಛೇದ 51(ಎ) 11 ಮೂಲಭೂತ ಕರ್ತವ್ಯಗಳು (1976ರ 42ನೇ ತಿದ್ದುಪಡಿ) ಸೇರಿದಂತೆ ವಿವಿಧ ಸಾಮಾಜಿಕ ನ್ಯಾಯದ ಕುರಿತು ಮಾಹಿತಿ ನೀಡಿದರು.
ಡಿಡಿಪಿಐ ಸೋಮಶೇಖರ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್, ಜಿಪಂ ಯೋಜನಾ ವಿಭಾಗದ ಬಸಪ್ಪ, ಗಂಗಾವತಿಯ ತೋಟಗಾರಿಕಾ ಇಲಾಖೆಯ ಮಣಿಕಂಠ, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಬಿ.ಎಸ್.ಸತ್ಯನಾರಾಯಣ, ಯಲಬುರ್ಗಾ ಸಾಮಾಜಿಕ ಅರಣ್ಯ ವಲಯದ ಬಸವರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿ ಉಪಸ್ಥಿತರಿದ್ದರು.