ಭಾರತದ ಸಂವಿಧಾನ ದೇಶದಲ್ಲಿ ವಾಸಿಸುವ ಸರ್ವಧರ್ಮದವರಿಗೂ ಹಾಗೂ ಎಲ್ಲ ಜಾತಿಗಳಿಗೂ ಅನ್ವಯ ಆಗುವಂತಹ ಹಕ್ಕು-ಕರ್ತವ್ಯಗಳು, ಕಾನೂನುಗಳ ಒಳಗೊಂಡ ಬೃಹತ್ ಗ್ರಂಥವಾಗಿದೆ. ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯ. ಇಂಥ ಸಂವಿಧಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತದ ಸಂವಿಧಾನ ದೇಶದಲ್ಲಿ ವಾಸಿಸುವ ಸರ್ವಧರ್ಮದವರಿಗೂ ಹಾಗೂ ಎಲ್ಲ ಜಾತಿಗಳಿಗೂ ಅನ್ವಯ ಆಗುವಂತಹ ಹಕ್ಕು-ಕರ್ತವ್ಯಗಳು, ಕಾನೂನುಗಳ ಒಳಗೊಂಡ ಬೃಹತ್ ಗ್ರಂಥವಾಗಿದೆ. ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯ. ಇಂಥ ಸಂವಿಧಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ 5 ವರ್ಷದ ಅವಧಿಯಾದರೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ 60 ವರ್ಷದ ಅವಧಿ ಇದೆ. ರಾಜಕಾರಣದಲ್ಲಿ ದೊರೆಯುವ ಯಾವುದೇ ಹುದ್ದೆಗಳು ಉನ್ನತ ಹುದ್ದೆಗಳಲ್ಲ, ಅವೆಲ್ಲವೂ ತಾತ್ಕಾಲಿಕ ಹುದ್ದೆಗಳು. ನಮ್ಮ ಸರ್ಕಾರ ಯುವಜನತೆಯಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಯುವ ಸಂಸತ್ ನಡೆಸಲು ಆದೇಶ ಮಾಡಿದೆ. ಕ್ಷೇತ್ರದಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಿಂದ 224 ವಿದ್ಯಾರ್ಥಿಗಳನ್ನು ಗುರುತಿಸಿ ಒಂದು ದಿನ ಯುವ ಸಂಸತ್ ಕಲಾಪ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ನಡೆಸಬೇಕು ಎಂದರು.

ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್ ಮಾತನಾಡಿದರು. ಸಮಾರಂಭಕ್ಕೂ ಮುನ್ನ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಪಂ ಇಒ ಎಂ.ಆರ್.ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

- - -

-15ಕೆಸಿಎನ್ಜಿ1: