ಮತದಾನದ ಮಹತ್ವ ಕುರಿತು ಜಾಗೃತಿ: ಕಾರು ರ‍್ಯಾಲಿಗೆ ಚಾಲನೆ

| Published : Apr 02 2024, 01:10 AM IST / Updated: Apr 02 2024, 08:26 AM IST

ಸಾರಾಂಶ

ಮತದಾನ ಜಾಗೃತಿ ಅಭಿಯಾನ ಪ್ರಯುಕ್ತ ಮಡಿಕೇರಿ ರಾಜಾಸೀಟು ಮುಂಭಾಗದಲ್ಲಿ ಮತದಾನ ಜಾಗೃತಿ ಕುರಿತ ಬೀದಿ ನಾಟಕ ಮತ್ತು ಕಾರು ರ‍್ಯಾಲಿ ಕಾರ್ಯಕ್ರಮ ನಡೆಯಿತು.  

 ಮಡಿಕೇರಿ :  ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಮತ್ತು ರೋಟರಿ ಜಿಲ್ಲೆ 3181 ಅವರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ಪ್ರಯುಕ್ತ ನಗರದ ರಾಜಾಸೀಟು ಮುಂಭಾಗದಲ್ಲಿ ಮತದಾನ ಜಾಗೃತಿ ಕುರಿತ ಬೀದಿ ನಾಟಕ ಮತ್ತು ಕಾರು ರ‍್ಯಾಲಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಮತ್ತು ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಸೋಮವಾರ ಚಾಲನೆ ನೀಡಿದರು. 

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತದಾನ ಜಾಗೃತಿ ಕುರಿತಾಗಿ ಸಾರ್ವಜನಿಕರು ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಮತ್ತು ಸಿ.ವಿಜಿಲ್ ಆಪ್ ಬಳಕೆ ಕುರಿತಾಗಿ ಮಾಹಿತಿ ನೀಡಿದರು. ಹಾಗೆಯೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಸಂವಿಧಾನದ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು. ಮಡಿಕೇರಿ ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಅವರು ಮತದಾನ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಆದ್ಯ ಕರ್ತವ್ಯ ಎಂದು ತಿಳಿಸಿದರು. 

ತಮ್ಮ ಮುಂದಿನ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮ ತಂಡದವರು ಮತದಾನದ ಮಹತ್ವ ಕುರಿತು ಪ್ರಸ್ತುತಪಡಿಸಿದ ಅರ್ಥಪೂರ್ಣವಾದ ಬೀದಿ ನಾಟಕವು ಸರ್ವರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಅನಂತಶಯನ, ಮಾತಂಡ ಸುರೇಶ್, ತಾ.ಪಂ.ಇಒ ಪೌರಾಯುಕ್ತರಾದ ವಿಜಯ್, ಮುಖ್ಯ ಆಯೋಜಕರಾದ ರೋಟರಿ ಜಿಲ್ಲೆ 3181 ರ ಮುಖ್ಯಸ್ಥರಾದ ವಿಶ್ವನಾಥ ಶೆಣೈ, ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಇತರರು ಇದ್ದರು.