ಹುಬ್ಬಳ್ಳಿ:
ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಆಯುರ್ವೇದಕ್ಕೆ ಅಪಾರ ಮಹತ್ವವಿದೆ. ಮನುಷ್ಯನ ಜೀವನಶೈಲಿ ಸುಧಾರಿಸುವುದಲ್ಲದೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಹೇಳಿದರು.ತೀರ್ಥಂಕರ ಮಹಾವೀರ 2625ನೇ ಜಯಂತಿ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಹುಬ್ಬಳ್ಳಿಯ ಆಚಾರ್ಯ ಶ್ರೀ108 ಶಾಂತಿಸಾಗರ ದಿಗಂಬರ ಜೈನ ಟ್ರಸ್ಟ್ ಹಾಗೂ ದಿಗಂಬರ ಜೈನ ಬೋರ್ಡಿಂಗ್ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ಮಾತನಾಡಿ, ಜೈನ ಸಂಘಟನೆಗಳು ಆಗಾಗ ಆಯೋಜಿಸುವ ಜನಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಸಾರ್ವಜನಿಕರು ಪಡೆಯಬೇಕೆಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ದಿಗಂಬರ ಸಂತ ಆಚಾರ್ಯ ಶ್ರೀಪುಣ್ಯಸಾಗರ ಮಹಾರಾಜ, ಉತ್ತಮ ಆಚಾರ, ವಿಚಾರ, ಆಹಾರಗಳಿಂದ ಕೂಡಿದ ಜೀವನಶೈಲಿ ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂದರು.
ಶಾಂತಿಸಾಗರ ಟ್ರಸ್ಟ್ ಅಧ್ಯಕ್ಷ ಧನಪಾಲ ಮುನ್ನೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ರಕ್ತಗುಂಪು ತಪಾಸಣೆ, ಬಿಪಿ, ಮಂಡಿನೋವು, ವೆರಿಕೋಸವೇನ್ಸ್, ಎಲಬು ಸಾಂಧ್ರತೆ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಾಯಿತು. ಜತೆಗೆ ಉಚಿತ ಔಷಧಿ ವಿತರಿಸಲಾಯಿತು. 150ಕ್ಕೂ ಹೆಚ್ಚು ಜನರು ಶಿಬಿರದ ಲಾಭ ಪಡೆದರು. ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಶಾಂತಿನಾಥ ಭವನ ಅಧ್ಯಕ್ಷ ಮಹಾವೀರ ಗೊಂಗಡಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಅಧ್ಯಕ್ಷ ಆರ್.ಟಿ. ತವನಪ್ಪನವರ, ಡಾ. ರವೀಂದ್ರಕುಮಾರ, ಡಾ. ಶ್ರೀನಿವಾಸ ರೆಡ್ಡಿ, ಡಾ. ಅಶ್ವತ್ಥ. ಡಾ. ಪ್ರಮೋದ. ಡಾ. ರವಿರಾಜ, ಡಾ. ಸುಷ್ಮಾ ಸೇವೆ ಉಪಸ್ಥಿತರಿದ್ದರು.ಹುಬ್ಬಳ್ಳಿಯ ಸಂಜಿವಿನಿ ಆಯುರ್ವೇದ ಆಸ್ಪತ್ರೆ ಮತ್ತು ನವಗ್ರಹ ತೀರ್ಥದ ಎ.ಜಿ.ಎಂ ಹೋಮಿಯೋಪತಿ ಆಸ್ಪತ್ರೆಯ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಿದರು. ನಂದಿನಿ ಗೋಟೂರೆ, ಜ್ಯೋತಿ ದೊಡ್ಡಮನಿ ಪ್ರಾರ್ಥಿಸಿದರು. ಶೈಲಶ್ರೀ ಮುರಗಿ ಸ್ವಾಗತಿಸಿದರು. ವಿಮಲ ಸಂಗಮಿ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಶಾಂತಿನಾಥ ಹೊತಪೇಟಿ ನಿರೂಪಿಸಿದರು.