ಆಯುರ್ವೇದವನ್ನು ಪ್ರತಿಯೊಬ್ಬರು ಅನುಭವಿಸಬೇಕು. ಇದು ಕೇವಲ ವೈದ್ಯಕೀಯ ವಿಜ್ಞಾನವಾಗಿರದೆ ಜೀವನ ಪದ್ಧತಿ ಎಂದು ಆರ್‌ಕೆಎಂ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರ್ಮಠ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆಯುರ್ವೇದವನ್ನು ಪ್ರತಿಯೊಬ್ಬರು ಅನುಭವಿಸಬೇಕು. ಇದು ಕೇವಲ ವೈದ್ಯಕೀಯ ವಿಜ್ಞಾನವಾಗಿರದೆ ಜೀವನ ಪದ್ಧತಿ ಎಂದು ಆರ್‌ಕೆಎಂ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರ್ಮಠ ಹೇಳಿದರು.

ನಗರದ ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಕಾಲೇಜಿನ ಚರಕ ಸಭಾಂಗಣದಲ್ಲಿ ಸಂಸ್ಥೆಯ ಬೆಳ್ಳಿ ಮಹೋತ್ಸವ ನಿಮಿತ್ತ ಜರುಗಿದ ಚರಕ ಜಯಂತಿ ಹಾಗೂ ವಿಶ್ವ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಾತ್ಯ ದೇಶಗಳು ಆಯುರ್ವೇದ ಕುರಿತು ಹೆಚ್ಚಿನ ಸಂಶೋಧನೆ ನಡೆಸುವ ಮುನ್ನವೇ ಭಾರತೀಯರು ನಮ್ಮ ಪರಂಪರೆಯ ಈ ಜ್ಞಾನ ಅಳವಡಿಸಿಕೊಂಡು ಮುನ್ನಡೆಸಬೇಕು. ಇಲ್ಲವಾದರೆ ಒಂದು ದಿನ ನಾವು ಅವರಿಂದಲೇ ಆಯುರ್ವೇದ ಕಲಿಯಬೇಕಾದ ಪರಿಸ್ಥಿತಿ ಬರಬಹುದು. ಆಯುರ್ವೇದದ ಬೆಳವಣಿಗೆ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಅರ್ಥಪೂರ್ಣ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಧ್ಯಾಪಕಿ ಡಾ.ಉಷಾರಾಣಿ ಸಾನು ಮಾತನಾಡಿ, ಪ್ರಾಚೀನ ಋಷಿಮುನಿಗಳು ಹೊಂದಿದ್ದ ಅಪಾರ ಜ್ಞಾನ ಮತ್ತು ಜ್ಞಾನ ಪರಂಪರೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡಬೇಕು. ಋಷಿಗಳು ನಮಗೆ ನೀಡಿದ ಜ್ಞಾನ ಮತ್ತು ಬೆಳಕಿಗಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕು ಎಂದರು.

ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಂ.ರುದ್ರಗೌಡರ, ಡಾ.ಎಚ್.ಎ.ಪಠಾಣ, ಡಾ.ತೇಜಸ್ವಿನಿ ಜಗನಗೌಡ, ಶಿವಶಂಕರ ಪಟ್ಟದ, ಡಾ.ಸಚಿನ ಜಾಧವ ಇದ್ದರು.