ಸಾರಾಂಶ
ಇತಿಹಾಸ ಪ್ರಸಿದ್ಧ ಅಯ್ಯನಕೆರೆ ದಂಡೆಯ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ವಿಶೇಷ ಪೂಜೆ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಕಡೂರುಮಳೆ ಸಮೃದ್ಧಿಯಾಗಿ ಬಂದರೆ ರೈತರ ಮೊಗದಲ್ಲಿ ಸಂತಸ ಮೂಡುತ್ತದೆ ಹಾಗಾಗಿ ವರುಣನ ಕೃಪೆ ರೈತರ ಮೇಲೆ ಇರಲಿ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು. ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿರುವ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ನಡೆದ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲೂಕಿನ ಅಯ್ಯನಕೆರೆ ರೈತರ ಜೀವನಾಡಿ. ಅದು ತುಂಬಿದಲ್ಲಿ ಸಾವಿರಾರು ಎಕರೆಗೆ ನೀರುಣಿಸಿ ರೈತರ ಬದುಕು ಹಸನುಗೊಳಿಸುತ್ತದೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟುದಾರರು ಮತ್ತು ಸಾರ್ವಜನಿಕರು ಅಯ್ಯನಕೆರೆ ತುಂಬಲು ಪೂಜಾ ಕಾರ್ಯಗಳನ್ನು ಮಾಡುತ್ತಿರುವುದು ಸಂತಸ ತಂದಿದೆ.
ಪ್ರತೀ ವರ್ಷ ಈ ಪೂಜೆ ನಡೆಯುತ್ತಿದ್ದು, ಬಂದ ಭಕ್ತರಿಗೆ ಬಲ್ಲಾ ಳೇಶ್ವರಸ್ವಾಮಿ ದೇವಾಲಯದ ಮುಂಭಾಗ ಅನ್ನ ಸಂತರ್ಪಣೆ ನಡೆಯುತ್ತಿರುವ ಅಡುಗೆ ಮನೆಗೆ ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಿಸಲು ₹5 ಲಕ್ಷ ಅನುದಾನ ಕೊಡುವುದಾಗಿ ತಿಳಿಸಿ ಇದೇ ಶ್ರಾವಣ ಮಾಸದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುವುದು ಎಂದರು.ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ, ಕೆರೆ ಕಟ್ಟೆಗಳು ನಮ್ಮೆಲ್ಲರ ಜೀವನಾಡಿ, ಅವುಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ನೀರು ಅತ್ಯಮೂಲ್ಯವಾದುದು. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. ವಿಪ ಸದಸ್ಯರಾದ ಎಸ್.ಎಲ್. ಭೋಜೇಗೌಡ ಮಾತನಾಡಿ, ಜೀವನಾಡಿಯಾದ ಅಯ್ಯನಕೆರೆಗೆ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದರ ಜೊತೆಗೆ ಕೆರೆ ಅಭಿವೃದ್ಧಿಗೆ ಕಾಮಗಾರಿ ನಡೆಯಬೇಕಿದೆ. ಇದಕ್ಕೆ ನಮ್ಮ ಸಹಕಾರ ಇರುತ್ತದೆ. ಜೊತೆಗೆ ರೈತರಲ್ಲಿ ನೀರು ಮತ್ತು ಕೆರೆ ಬಗ್ಗೆ ಕಾಳಜಿ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಎಸ್. ಪಿ. ಲೋಕೇಶ್, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಜಿಪಂನ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ಎಪಿಎಂಸಿ ಮಾಜಿ ಸದಸ್ಯ ಲೋಕೇಶ್, ನೂರಾರು ಅಚ್ಚುಕಟ್ಟುದಾರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 20ಕೆಕೆಡಿಯು3.
ಕಡೂರು ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆ ಶ್ರೀ ಬಲ್ಲಾಳೇಶ್ವರಸ್ವಾಮಿಗೆ ಮಳೆಗಾಗಿ ವಿಶೇಷ ಪೂಜಾ ಕಾರ್ಯ ನಡೆದವು.