ಮಡಿಕೇರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ೩೬ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ೧೪ ರಂದು ನಡೆಯಲಿದೆ.
ಮಡಿಕೇರಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ೩೬ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ೧೪ ರಂದು ನಡೆಯಲಿದೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೩ರಂದು ಬೆಳಗ್ಗೆ ೮ ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಶೇಕ ಇತ್ಯಾದಿ ಸೇವೆ ನಡೆಯಲಿದೆ ಎಂದರು.೧೪ರ ಬೆಳಗ್ಗೆ ೬.೩೦ ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ೭ ಗಂಟೆಗೆ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, ೭.೩೦ರಿಂದ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ನಡೆಯಲಿದೆ. ಬೆಳಗ್ಗೆ ೮.೩೦ಕ್ಕೆ ಕುಟ್ಟಿಚಾತನ್ ವೆಳ್ಳಾಟಂ, ೯ಕ್ಕೆ ಮುತ್ತಪ್ಪ ವೆಳ್ಳಾಟಂ, ೧೦ಕ್ಕೆ ಗುಳಿಗ ವೆಳ್ಳಾಟಂ ನಡೆಯಲಿದೆ ಎಂದು ಮಾಹಿತಿ ನೀಡಿದರು.ಬೆಳಗ್ಗೆ ೧೦.೩೦ಕ್ಕೆ ಅಯ್ಯಪ್ಪ ದೇವರ ಅಲಂಕಾರ ಪೂಜೆ ನಡೆಯಲಿದೆ. ೧೧ ಗಂಟೆಗೆ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬ರಿಂದ ಭಜನೆ, ೭ರಿಂದ ಅಲಂಕಾರ ಪೂಜೆ ಮತ್ತು ಪಡಿಪೂಜೆ ಹಾಗೂ ರಾತ್ರಿ ೮ಕ್ಕೆ ದೀಪಾರಾಧನೆಯ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಸುಧೀರ್ ವಿವರಿಸಿದರು.ದೇವಾಲಯದ ಸ್ಥಾಪಕಾಧ್ಯಕ್ಷ ಮತ್ತು ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಮನೋಹರ್.ಜಿ.ಪಾಟ್ಕರ್, ಪ್ರಧಾನ ಕಾರ್ಯದರ್ಶಿ ವಿ.ಎಸ್.ವಿನೋದ್, ದೇವಾಲಯ ಸಮಿತಿ ಸಲಹೆಗಾರರಾದ ಜಯಂತಿ ಶೆಟ್ಟಿ, ಸದಸ್ಯರಾದ ಸದಾಶಿವ ಶೆಟ್ಟಿ, ಪೂವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.