ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಬಿ. ಖಾತಾ ಆಂದೋಲನದಡಿ ಆರು ವರ್ಷಗಳ ದುಪ್ಪಟ್ಟು ಕಂದಾಯ ವಸೂಲಾತಿಗೆ ಇನ್ನೆರಡು ದಿನಗಳಲ್ಲಿ ರದ್ದುಗೊಳ್ಳಲಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಬಿ. ಖಾತಾ ಆಂದೋಲನ ಅರಂಭವಾದ ನಂತರ ಮೈಸೂರು ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ 6 ವರ್ಷಗಳ ದುಪ್ಪಟ್ಟು ಕಂದಾಯ ವಸೂಲಾತಿಗೆ ಜಿಲ್ಲಾಧಿಕಾರಿಗಳು ಮೌಖಿಕ ಆದೇಶ ಹೊರಡಿಸಿದ್ದರು. ಈ ಕುರಿತು ಹುಣಸೂರು ಪಟ್ಟಣದ ನಾಗರಿಕರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮತ್ತು ತಮ್ಮ ಬಳಿ ಈ ಬಗ್ಗೆ ದೂರುಗಳು ಬಂದಿದ್ದವು. ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ತಿಳಿಸಿದ್ದೆ. ಅದರಂತೆ ಸೋಮವಾರ ಜಿಲ್ಲಾಧಿಕಾರಿಗಳು ಸಮಯ ನಿಗದಿ ಮಾಡಿದ್ದರಿಂದ ಹುಣಸೂರು ನಗರಸಭೆಯ ಕೌನ್ಸಿಲರ್ಸ್ಗಳು ಮತ್ತು ನಾಗರಿಕರನ್ನೊಡಗೂಡಿ ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಾಯಿತು ಎಂದರು.ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತ್ತು ಪ್ರಸ್ತುತ ವರ್ಷದ ಕಂದಾಯವನ್ನು ಮಾತ್ರ ದುಪ್ಪಟ್ಟು ಪ್ರಮಾಣದಲ್ಲಿ ವಸೂಲಾತಿ ಮಾಡಲು ಮತ್ತು 6 ವರ್ಷಗಳ ದುಪ್ಪಟ್ಟು ಕಂದಾಯವನ್ನು ರದ್ದುಗೊಳಿಸಲು ಕ್ರಮವಹಿಸಿ 2-3 ದಿನಗಳಲ್ಲಿ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಕುಮಾರ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಶ್ರೀನಾಥ್, ದೇವನಾಯ್ಕ, ಮುಖಂಡ ನಿಂಗರಾಜು ಇದ್ದರು.