ರಾಮನಗರ; ಸುಗ್ಗನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ನರಸಿಂಹಯ್ಯ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ) ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿ.ನರಸಿಂಹಯ್ಯ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿದ್ದ ಮಂಜುನಾಥ್ ರವರು ಸುಗ್ಗನಹಳ್ಳಿ ಪಿಎಸಿಎಂಎಸ್ ಅಧ್ಯಕ್ಷರಾಗಿ ಬಿ.ನರಸಿಂಹಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಸಂಘದ ಸಿಇಒ ಎಲ್.ಪ್ರಕಾಶ್ ಇದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಉಪಾಧ್ಯಕ್ಷೆ ರಾಮಕ್ಕ, ನಿರ್ದೇಶಕರಾದ ಜಿ.ಎಲ್.ಆಂಜನೇಯ, ಕೃಷ್ಣಮೂರ್ತಿ, ಕೃಷ್ಣಪ್ಪ, ಹೊನ್ನಯ್ಯ, ರವಿ, ಕೃಷ್ಣ ಜಯಮ್ಮ, ವೆಂಕಟೇಶ್, ವೆಂಕಟಯ್ಯ ಹಾಜರಾದರೆ, ಕೆ.ಚಂದ್ರಯ್ಯ ಮತ್ತು ಕೆ.ಎಲ್.ಸಿದ್ದಲಿಂಗಯ್ಯ ಗೈರಾಗಿದ್ದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ನರಸಿಂಹಯ್ಯ, ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದ


ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಎಲ್ಲ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಿಂದಿನ ಅಧ್ಯಕ್ಷರು ಸಂಘವು ಲಾಭದಲ್ಲಿರುವಂತೆ ಉತ್ತಮ ಆಡಳಿತ ನೀಡಿದ್ದು ಆ ಮಾದರಿಯಲ್ಲಿ ನಾನು ಸಹ ಸಿಇಒ ಪ್ರಕಾಶ್ ಮತ್ತು ನಿರ್ದೇಶಕರ ಸಹಕಾರ ಪಡೆದು ಸಂಘದ ಪ್ರಗತಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಸಂಘವು ಆರ್ಥಿಕ ವರ್ಷದಲ್ಲಿ ₹6 ಲಕ್ಷದ 82 ಸಾವಿರ ಲಾಭದಲ್ಲಿದೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ₹7.5 ಕೋಟಿ ಕೆಸಿಸಿ ಸಾಲ ವಿತರಣೆ ಮಾಡಿರುವ ಹೆಗ್ಗಳಿಕೆ ಸುಗ್ಗನಹಳ್ಳಿ ಪಿಎಸಿಎಂಎಸ್‌ಗೆ ಇದೆ. ಸಂಘದ ಸ್ವಂತ ಬಂಡವಾಳದಲ್ಲಿ ಸ್ವಸಹಾಯ ಸಂಘಗಳಿಗೆ ₹2.20 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಇಂತಹ ಮಾದರಿಯುತವಾದ ಸಹಕಾರ ಸಂಘವನ್ನು ನಾವೆಲ್ಲರೂ‌ ಸೇರಿ ಗಟ್ಟಿಗೊಳಿಸುವ ಆಶಯ ನನ್ನದಾಗಿದ್ದು, ಎಲ್ಲರೂ‌ ಸಹಕರಿಸುವಂತೆ ಮನವಿ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಹೋಟೆಲ್ ಉಮೇಶ್, ಜೆಡಿಎಸ್ ಮುಖಂಡರಾದ ಎಸ್.ಆರ್.ರಾಮ ಕೃಷ್ಣಯ್ಯ, ಲಕ್ಕಸಂದ್ರ ಮಹದೇವ, ಶಿವರುದ್ರಯ್ಯ, ಶಾಂತಪ್ಪ, ಗಂಗಾಧರಚಾರ್, ಸುರೇಂದ್ರನಾಥ (ಬಾಬು) ಗುರುಲಿಂಗಯ್ಯ, ಕುಮಾರ, ರಮೇಶ್, ಉಮೇಶ್ ಮತ್ತಿತರರು ನೂತನ ಅಧ್ಯಕ್ಷ ಬಿ.ನರಸಿಂಹಯ್ಯ ಅವರನ್ನು ಅಭಿನಂದಿಸಿದರು.