ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಬಿ.ಎಸ್.ಮಹೇಶ್‌ಕುಮಾರ್ ಆಗ್ರಹ

| Published : May 28 2025, 12:35 AM IST

ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಬಿ.ಎಸ್.ಮಹೇಶ್‌ಕುಮಾರ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗೌರವ ಧನವಾಗಿ ಹಿಂದೆ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ೧೦ ಸಾವಿರ ರು., ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ೧೦,೫೦೦ ರು. ನೀಡಲಾಗುತ್ತಿದ್ದು, ಪ್ರಸಕ್ತ ಬಜೆಟ್‌ನಲ್ಲಿ ೧೨,೦೦೦ ಮತ್ತು ೧೨,೫೦೦ ರು. ಹಣವನ್ನು ಕ್ರಮವಾಗಿ ನೀಡಲಾಗುತ್ತಿದೆ. ನಮಗೆ ಗೌರವ ಧನದ ಬದಲಾಗಿ ಕನಿಷ್ಠ ವೇತನದ ಭಾಗವಾಗಿ ೨೫ ಸಾವಿರ ರು. ವೇತನ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಅತಿಥಿ ಶಿಕ್ಷಕರನ್ನು ಕಾಯಂ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್ ಈಗ ಸರ್ಕಾರ ರಚನೆಯಾದರೂ ತಾನು ನುಡಿದಂತೆ ನಡೆಯದೇ ಅತಿಥಿ ಶಿಕ್ಷಕರಿಗೆ ಅನ್ಯಾಯ ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಮಹೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಾಕಷ್ಟು ಭರವಸೆಗಳನ್ನು ಈಡೇರಿಸಿದ್ದು, ಅತಿಥಿ ಶಿಕ್ಷಕರ ಕಾಯಂ ನೇಮಕ ಮಾಡುವುದಾಗಿ ಹೇಳಿ ದ್ರೋಹ ಬಗೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗೌರವ ಧನವಾಗಿ ಹಿಂದೆ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ೧೦ ಸಾವಿರ ರು., ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ೧೦,೫೦೦ ರು. ನೀಡಲಾಗುತ್ತಿದ್ದು, ಪ್ರಸಕ್ತ ಬಜೆಟ್‌ನಲ್ಲಿ ೧೨,೦೦೦ ಮತ್ತು ೧೨,೫೦೦ ರು. ಹಣವನ್ನು ಕ್ರಮವಾಗಿ ನೀಡಲಾಗುತ್ತಿದೆ. ನಮಗೆ ಗೌರವ ಧನದ ಬದಲಾಗಿ ಕನಿಷ್ಠ ವೇತನದ ಭಾಗವಾಗಿ ೨೫ ಸಾವಿರ ರು. ವೇತನ ನೀಡುವಂತೆ ಮನವಿ ಮಾಡಿದರು.

ಅತಿಥಿ ಶಿಕ್ಷಕರನ್ನು ಕಾಯಂ ಮಾಡುವ ಸಲುವಾಗಿ ಸಚಿವರ ಭೇಟಿ, ಪ್ರತಿಭಟನೆ ಹೋರಾಟ, ಗಮನಸೆಳೆಯುವ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ, ಶಿಕ್ಷಣ ಸಚಿವರ ಭರವಸೆ ಈಡೇರಿಸುವುದಾಗಿ ಹೇಳಿ ಈಗ ಮೌನ ತಾಳಿದ್ದಾರೆ. ಯಾರ ನಮ್ಮ ಪರ ಧ್ವನಿಯಾಗದೇ ಇದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗುವಂತೆ ಮನವಿ ಮಾಡಿದರು.

ಅತಿಥಿ ಶಿಕ್ಷಕರ ಆಯ್ಕೆಗೆ ಸೇವಾ ಹಿರಿತನ ಆದ್ಯತೆ, ಶೇ. ೫ರಷ್ಟು ಕೃಪಾಂಕ, ಸೇವಾ ಪ್ರಮಾಣ ಪತ್ರ ನೀಡುವುದು, ಕನಿಷ್ಠ ಕೂಲಿ ೨೫೦೦೦ ವೇತನ, ಅಂಗವಿಕಲ ಶಿಕ್ಷಕರಿಗೆ ಶೇ.೧೦ರಷ್ಟು ಮೀಸಲಾತಿ, ಕಾಯಂ ಶಿಕ್ಷಕರ ನೇಮಕಾತಿ ವೇಳೆ ಶೇ.೫೦ರಷ್ಟನ್ನು ಅತಿಥಿ ಶಿಕ್ಷಕರಿಗೆ ಮೀಸಲಾತಿ ಸೇರಿದಂತೆ ಇತರ ಬೇಡಿಕೆ ಈಡೇರಿಸಬೇಕು, ಸೇವಾ ಭದ್ರತೆ ನೀಡಬೇಕು, ಸುಪ್ರಿಂ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಯು.ಪ್ರಭು, ವಿಜಯ್ ಇದ್ದರು.