ಸಾರಾಂಶ
ಧಾರವಾಡ: ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ ಬಿ.ವಿ. ಕಾರಂತರು ವಿನೂತನ ಶೈಲಿಯನ್ನು ಅಳವಡಿಸಿಕೊಂಡು ನಾಟಕಗಳನ್ನು ಸಿದ್ಧಪಡಿಸುವ ಮೂಲಕ ರಂಗಭೂಮಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪಂ. ಕೈವಲ್ಯಕುಮಾರ ಗುರವ ಹೇಳಿದರು.
ರಂಗಾಯಣವು ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಬಿ.ವಿ. ಕಾರಂತರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ, ರಂಗ ಸಂಗೀತ ಹಾಗೂ ರೆಪರ್ಟರಿ ಕಲಾವಿದರಿಂದ ರಂಗ ಪ್ರಯೋಗ ಉದ್ಘಾಟಿಸಿ ಅವರು ಮಾತನಾಡಿದರು.ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಹಲವಾರು ನಾಟಕಗಳನ್ನು ಹಾಗೂ ಕಲಾವಿದರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದ್ದಾರೆ. ವಿಶೇಷವಾಗಿ ಸಂಗೀತವನ್ನು ಹೆಚ್ಚಾಗಿ ಬಳಸಿ ನಾಟಕಗಳನ್ನು ನೋಡುಗರಿಗೆ ತಲುಪಿಸುತ್ತಿದ್ದರು. ರಂಗಭೂಮಿಯ ಬೆಳವಣಿಗೆಯನ್ನು ರಂಗಾಯಣಗಳ ಮೂಲಕ ಆರಂಭಿಸಿ ರಂಗಭೂಮಿಯನ್ನು ನಾಡಿನಾದ್ಯಂತ ಪರಿಚಯಿಸಿದ್ದಾರೆ ಎಂದರು.
ರಂಗನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಕಾರಂತರು ಓದು, ಭಜನೆಯಲ್ಲಿ ಆಸಕ್ತಿ ಹೊಂದಿದ್ದರು. ಗುಬ್ಬಿ ವೀರಣ್ಣ ಕಂಪನಿಯಿಂದ ರಂಗಭೂಮಿ ಕಲಿಯನ್ನು ಆರಂಭಿಸಿದ ಕಾರಂತರು ಸಂಗೀತವನ್ನು ಹೆಚ್ಚಾಗಿ ಬಳಸಿ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶನ ಮಾಡುವಲ್ಲಿ ಮೊದಲಿಗರು. ಕಾರಂತರು ವೃತ್ತಿ ರಂಗಭೂಮಿಯಲ್ಲಿ ಮೊದಲಿಗೆ ಹಿಮ್ಮೇಳವನ್ನು ಬಳಸಿದರು. ಅಲ್ಲದೆ ವಾದ್ಯಗಳನ್ನು, ಪ್ಲಾಸ್ಟಿಕ್ ಬಾಟಲ್, ಡ್ರಮ್, ಬಳಕೆಗೆ ಉಪಯೋಗವಲ್ಲದ ವಸ್ತುಗಳನ್ನು ಬಳಸಿಕೊಂಡು ಸಂಗೀತವನ್ನು ನಾಟಕದಲ್ಲಿ ಮೊದಲ ಬಾರಿಗೆ ಬಳಸಿದರು. ಕಾರಂತರು ಕನ್ನಡ ಮಾತ್ರವಲ್ಲದೆ ಮರಾಠಿ, ತೆಲುಗು, ಹಿಂದೆ ಸಂಸ್ಕೃತ ಸೇರಿದಂತೆ ಅನೇಕ ಭಾಷೆಗಳಲ್ಲಿ ನಾಟಕಗಳನ್ನು ರಚಿಸಿದ್ದಾರೆ ಎಂದರು.ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಸಂಗೀತಗಾರರಾದ ಹನುಮಂತ ಪಾದಗಟ್ಟಿ, ಅನೀಲ ಮೇತ್ರಿ ಹಾಗೂ ರಂಗಾಯಣ ರೆಪರ್ಟರಿ ಕಲಾವಿದರು ರಂಗ ಸಂಗೀತ ಪ್ರಸ್ತುತಪಡಿಸಿದರು. ನಂತರ ಡಾ. ರಾಜು ತಾಳಿಕೋಟಿ ನಿರ್ದೇಶಿಸಿದ ‘ಒಂದು ಹಾಡಿನ ಕತೆ’ ರಂಗ ಪ್ರಯೋಗ ಜರುಗಿತು.