ಬಾಬು ಜಗಜೀವನರಾಂ ಜೀವನ ಮೌಲ್ಯ ಅನುಕರಣೀಯ: ಡಿಸಿ ದಿವಾಕರ

| Published : Apr 07 2024, 01:47 AM IST

ಬಾಬು ಜಗಜೀವನರಾಂ ಜೀವನ ಮೌಲ್ಯ ಅನುಕರಣೀಯ: ಡಿಸಿ ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ವಿಪರೀತವಾಗಿತ್ತು. ಜಗಜೀವನ್ ರಾಮ್ ಶಾಲಾ ದಿನಗಳಲ್ಲಿದ್ದಾಗ ಅಸ್ಪೃಶ್ಯತೆಯ ಅವಮಾನ ಅನುಭವಿಸಿದರು.

ಹೊಸಪೇಟೆ: ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನರಾಂ ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವ ಪ್ರಯುಕ್ತ ನಗರದ ಡಾ.ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ದೀನ ದಲಿತರು, ಕೃಷಿಕರು, ಕಾರ್ಮಿಕರು ಸೇರಿದಂತೆ ಕಡುಬಡವರ ಏಳ್ಗೆಯ ಬಗ್ಗೆ ಕಾಳಜಿ ಹೊಂದಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ, ನೊಂದ ಜನಸಮುದಾಯದ ಏಳ್ಗೆಗೆ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಈ ಹಿಂದೆ ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ವಿಪರೀತವಾಗಿತ್ತು. ಜಗಜೀವನ್ ರಾಮ್ ಶಾಲಾ ದಿನಗಳಲ್ಲಿದ್ದಾಗ ಅಸ್ಪೃಶ್ಯತೆಯ ಅವಮಾನ ಅನುಭವಿಸಿದರು. ಆಗ ಅವರಲ್ಲಿ ಹೋರಾಟದ ಮನೋಭಾವ ಬೆಳೆಯಿತು. ಅಸ್ಪೃಶ್ಯತೆ, ತಾರತಮ್ಯ, ಜಾತೀಯತೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು. ಗಾಂಧಿಯವರು ನಡೆಸಿದ ಅಸ್ಪೃಶ್ಯತೆಯ ವಿರುದ್ಧ ಹೋರಾಟದಲ್ಲಿ ಸಹ ಅವರು ಭಾಗಿಯಾದರು ಎಂದು ತಿಳಿಸಿದರು.

ಜಗಜೀವನ್ ರಾಮ್ ತಮ್ಮ ಜೀವನದುದ್ದಕ್ಕೂ ಸಮ ಸಮಾಜದ ನಿರ್ಮಾಣಕ್ಕಾಗಿ ಹಾಗೂ ದಲಿತರ ಹಕ್ಕುಗಳಿಗಾಗಿ ಹೋರಾಡಿದರು. ಸಚಿವರಾಗಿದ್ದ ಅವಧಿಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಹೊಸ ಕಾಯ್ದೆ ಜಾರಿಗೆ ತಂದರು. ಅವರು ಕೃಷಿ ಸಚಿವರಾಗಿದ್ದಾಗ ಭಾರತದಲ್ಲಿ ಹಸಿರು ಕ್ರಾಂತಿ ನಡೆಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಹೆಚ್.ಎಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದಪ್ಪ್ರ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.