ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತ ದೇಶದ ಅಭಿವೃದ್ಧಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆ ಅನನ್ಯ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ.ಬಾಬು ಜಗಜೀವನರಾಮ್ ಅವರ 117ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಅವರು ಮಾತನಾಡಿ, ಭಾರತ ಪ್ರಥಮ ಕೃಷಿ ಸಚಿವರಾಗಿ ರೈತರ ಅಭಿವೃದ್ಧಿಗಾಗಿ ಮಹತ್ತರ ಬದಲಾವಣೆಗಳನ್ನು ತಂದು ದೇಶದಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿದ ಮಹಾನ್ ನಾಯಕರಾಗಿ ಬೆಳೆದು ಬರುವುದರೊಂದಿಗೆ ರಕ್ಷಣಾ ಸಚಿವರಾಗಿ ಭಾರತ ಹಾಗೂ ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಯುದ್ಧದ ನೇತೃತ್ವ ವಹಿಸಿ ಯುದ್ಧದಲ್ಲಿ ಜಯಶಾಲಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಅವರು ಸ್ವಾತಂತ್ರ ಹೋರಾಟಗಾರರಾಗಿ ಸಾಮಾಜಿಕ ನ್ಯಾಯದ ಹೋರಾಟಗಾರರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಅವರ ಆದರ್ಶ ನಮಗೆ ಮಾದರಿಯಾಗಿವೆ ಎಂದು ಅವರು ಹೇಳಿದರು.
ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ಡಾ.ಬಾಬು ಜಗಜೀವನರಾಮ್ ಅವರ ಬಾಲ್ಯದ ಕಷ್ಟದ ದಿನಗಳಲ್ಲಿ ನಿರಂತರ ಛಲ ಬಿಡದೇ ವಿದ್ಯಾಭ್ಯಾಸ ಮಾಡುವುದರೊಂದಿಗೆ ಶಾಲಾ ದಿನಗಳಲ್ಲಿ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ ಅವರು ಸಾಮಾಜಿಕ ಕಳಕಳಿ ಜೊತೆಗೆ ರೈತರ ಕರಿತು ಅಪಾರ ಕಾಳಜಿ ಹೊಂದಿದ್ದರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಕಾರಣ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸೋಣ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ, ಅಡಿವೆಪ್ಪ ಸಾಲಗಲ್ಲ, ಪರಸು ಚಲವಾದಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮೀರೆಕರ, ವಿದ್ಯಾವತಿ ಅಂಕಲಗಿ, ಮುದಕಪ್ಪ ಕೋಟ್ಯಾಳ, ಚಿಕ್ಕಯ್ಯ ಮಂಚರ, ಹಾಜಿಲಾಲ ಕಬಾಡೆ, ಶ್ರೀನಿವಾಸ ಶಹಾಪುರ, ನಾಗರಾಜ ಕಬಾಡೆ, ತಬ್ಬಣ್ಣಾ ಹೊನ್ನಕಸ್ತೂರಿ, ಬಿ.ಎಸ್. ಗಸ್ತಿ, ದೇವೇಂದ್ರ ಕಬಾಡೆ, ದೇವೇಂದ್ರ ಹೊನ್ನಕಸ್ತೂರಿ, ನಿತೀನ ಕುಮಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.