ಸಾರಾಂಶ
ಗಂಗಾವತಿ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿಯ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಿದರು.ರಾಮಚಂದ್ರ ನಡೆದಾಡಿದ ಪವಿತ್ರ ಕ್ಷೇತ್ರ ಮತ್ತು ಆಂಜನೇಯ ಜನಿಸಿದ ಅಂಜನಾದ್ರಿ ಸನಿಹದಲ್ಲಿ ನದಿ ಇದ್ದು, ಸಾವಿರಾರು ಭಕ್ತರು ಸ್ನಾನ ಮಾಡಿ, ದೇವರ ದರ್ಶನ ಪಡೆದರು.ತಾಲೂಕಿನ ಚಿಂತಾಮಣಿ ಬಳಿ ಇರುವ ನರಸಿಂಹಸ್ವಾಮಿ ದೇಗುಲ, ರುದ್ರಾಕ್ಷಿ ಮಂಟಪ ಶ್ರೀಚಕ್ರ ಕಾಶಿ ವಿಶ್ವನಾಥ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ನವ ವೃಂದಾವನಕ್ಕೆ ತೆರಳಿದ ಭಕ್ತರು 9 ಯತಿವರಣ್ಯೇರ ದರ್ಶನ ಪಡೆದರು.ಅಂಜನಾದ್ರಿಗೆ 50 ಸಾವಿರಕ್ಕೂ ಹೆಚ್ಚು ಭಕ್ತರು: ಮಕರ ಸಂಕ್ರಾಂತಿ ದಿನವಾಗಿದ್ದ ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದರು. ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಬೆಟ್ಟ ಏರಿದರು. ಆಂಜನೇಯಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.ವಾಹನ ಸಂಚಾರ ಅಸ್ತವ್ಯಸ್ತ: ಅಂಜನಾದ್ರಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಗಂಗಾವತಿ- ಮುನಿರಾಬಾದ್ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹಗಳನ್ನು ನಿಲ್ಲಿಸಿದ್ದರಿಂದ ಪೊಲೀಸರು ಸುಗಮ ಸಂಚಾರ ಕೈಗೊಳ್ಳಲು ಹರಸಾಹಸಪಟ್ಟರು.