ಬಾಗಲಕೋಟೆ ನಗರಸಭೆ: ಆರೋಪ, ಪ್ರತ್ಯಾರೋಪ

| Published : Jun 07 2025, 01:48 AM IST

ಸಾರಾಂಶ

ಬಾಗಲಕೋಟೆ ನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಪರಸ್ಪರ ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿಗೆ ಕಾರಣರಾದ ಘಟನೆ ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಪರಸ್ಪರ ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿಗೆ ಕಾರಣರಾದ ಘಟನೆ ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆಯಿತು.

ನಗರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯರಾದ ಸ್ಮಿತಾ ಪವಾರ್ ಅವರು, ಪೌರಾಯುಕ್ತ ಆರ್. ವಾಸಣ್ಣ ವಿರುದ್ಧ ವಾಗ್ದಾಳಿ ಆರಂಭಿಸಿ ನಿಮ್ಮ ಕಚೇರಿಗೆ ಬರುವ ಸದಸ್ಯರನ್ನು ಗೌರವದಿಂದ ಕಾಣದೇ ಅವಮಾನಿಸುತ್ತೀರಿ. ನಾವು ವೈಯಕ್ತಿಕ ಕೆಲಸಕ್ಕೆ ಬರಲ್ಲ. ವಾರ್ಡ್‌ ಜನರ ಸಮಸ್ಯೆ ಹಾಗೂ ಕೆಲಸಗಳಿಗಾಗಿ ನಿಮ್ಮ ಬಳಿ ಬರುತ್ತೇವೆ. ಆಗ ನೀವು ಜನರ ಮುಂದೆಯೇ ನಮ್ಮನ್ನು ಅಗೌರವದಿಂದ ನೋಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸದಸ್ಯರ ವಾಗ್ದಾಳಿಗೆ ತಿರುಗೇಟು ನೀಡಿದ ಪೌರಾಯುಕ್ತರು, ಹಿಂದೆ ಯಾವಾಗಲೋ ನಡೆದ ಘಟನೆಯನ್ನು ಈಗ ಕ್ರಿಯೇಟ್ ಮಾಡುತ್ತಿದ್ದೀರಿ ಎಂದು ದೂರಿದರು. ಇದರಿಂದ ಮತ್ತಷ್ಟು ಕುಪಿತರಾದ ಸದಸ್ಯೆ ಸ್ಮೀತಾ ಪವಾರ್ ನಾವು ಹೀಗೆಯೇ ನಮ್ಮೂರಿನ ಜನರು ಹೀಗೆಯೇ. ನಿಮಗೆ ಸರಿ ಅನಿಸಿದರೆ ನೌಕರಿ ಮಾಡಿ, ಇಲ್ಲದಿದ್ದರೆ ಬೇರೆ ಊರಿಗೆ ಹೋಗಿ ಎಂದು ತರಾಟೆಗೆ ತೆಗೆದುಕೊಂಡರು. ಇದರ ಮಧ್ಯೆಯೇ ಸದಸ್ಯೆ ಶಶಿಕಲಾ ಮಜ್ಜಗಿ ಅವರು ನೀವು ಸದಸ್ಯರೊಂದಿಗೆ ಅಗೌರವದಿಂದ ನಡೆದುಕೊಂಡಿದ್ದು ನಿಜ. ಅದನ್ನು ಒಪ್ಪಿಕೊಳ್ಳಿ ಎಂದು ಪೌರಾಯುಕ್ತರು ಆಗ್ರಹಿಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎನ್ನುವುದನ್ನು ಅರಿತ ಸದಸ್ಯ ಬಸವರಾಜ ಅವರಾದಿ ಚರ್ಚೆಯ ವಿಷಯದ ಮೇಲೆ ತಿಪ್ಪೆ ಸಾರಿಸುವ ಕೆಲಸ ಮಾಡಿ ಚರ್ಚೆಗೆ ಇತಿಶ್ರೀ ಹಾಡಿದರು. ಅಚ್ಚರಿ ಸಂಗತಿ ಎಂದರೆ ನಗರಸಭೆಯಲ್ಲಿ ಬಿಜೆಪಿಯ 30ಕ್ಕೂ ಅಧಿಕ ಜನರು ಸದಸ್ಯರಿದ್ದರೂ ಸ್ಮೀತಾ ಪವಾರ್ ಅವರ ಮಾತಿಗೆ ಸಾಥ್ ನೀಡಿದವರು ಒಬ್ಬಿಬ್ಬರು ಮಾತ್ರ.

ಸ್ಮೀತಾ ಪವಾರ್ ತಮಗೆ ಆದ ಅವಮಾನದ ವಿರುದ್ಧ ಮಾತು ಮುಂದುವರಿಸಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಇತರ ಸದಸ್ಯರೊಂದಿಗೂ ಅವಮಾನಕರ ರೀತಿಯಲ್ಲಿ ನಡೆದುಕೊಂಡಿದ್ದೀರಿ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ನಿಮ್ಮ ಆರೋಪ ಸರಿಯಲ್ಲ. ನೀವು ಹೇಳಿದ ಟೆಂಡರ್ ರದ್ದು ಮಾಡಿಲ್ಲ ಎನ್ನುವ ಕಾರಣಕ್ಕೆ ವಿನಾಕಾರಣ ಆರೋಪ ಮಾಡುತ್ತಿದ್ದೀರಿ ಎಂದು ಏರು ಧ್ವನಿಯಲ್ಲಿ ಉತ್ತರಿಸಿದರು. ಸ್ಮೀತಾ ಪವಾರ್ ಅವರು ನೀವು ನಮ್ಮನ್ನು ಹೊರ ಹೋಗಿ ಎನ್ನುವ ಜೊತೆಗೆ ಭಯೋತ್ಪಾದಕರಂತೆ ಗುಂಡು ಹೊಡೆಯಬೇಕು ಎಂದು ಹೇಳಿದ್ದೀರಿ. ಅದನ್ನು ಒಪ್ಪಿಕೊಳ್ಳಿ ಎಂದರು, ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ ನೀವು ಹಾಗೆ ಹೇಳಿದ್ದು ನಿಜ ಎಂದು ಸಾಥ್‌ ನೀಡಿದರು.

ಈ ವೇಳೆ ಟೆಂಡರ್ ರದ್ದು ಏಕೆ ಮಾಡಲಿಲ್ಲ? ಕೇವಲ ನಾಲ್ಕು ವಾರ್ಡ್‌ಗಳಲ್ಲಿ ಮಾತ್ರ ಕಾಮಗಾರಿ ಕೈಗೊಂಡಿರುವುದು ಏಕೆ ಎಂದು ಬಿಜೆಪಿಯ ಸದಸ್ಯರು ಆಯುಕ್ತರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಶಾಸಕರ ಮಾರ್ಗದರ್ಶನದಲ್ಲಿ ಕೆಲಸ ತೆಗೆದುಕೊಳ್ಳಲಾಗಿದೆ ಎಂದು ಸಮಜಾಯಿಸಿ ನೀಡಿದರು.

ಎಲ್ಲವನ್ನು ಶಾಸಕರನ್ನೇ ಕೇಳಿ ಮಾಡುವುದಾದರೆ ಇತರೆ ಸದಸ್ಯರ ವಾರ್ಡ್‌ಗಳ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ? ಎಂದ ಸದಸ್ಯರು, ನೀವು ಟೆಂಡರ್ ರದ್ದುಗೊಳಿಸಿ ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿ ತೆಗೆದುಕೊಳ್ಳಬೇಕಾಗಿತ್ತು ಎಂದರು, ಆಗ ಪೌರಾಯುಕ್ತರು ಹಂತ ಹಂತವಾಗಿ ಎಲ್ಲ ವಾರ್ಡ್‌ಗಳಲ್ಲಿ ಕೆಲಸ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಬಾಕ್ಸ್‌-----

ಬಿಜೆಪಿಯಲ್ಲಿ ಒಡಕು ಪ್ರದರ್ಶನ:ನಗರಸಭೆಯಲ್ಲಿ 30 ಜನ ಬಿಜೆಪಿ ಸದಸ್ಯರಿದ್ದರೂ ಪೌರಾಯುಕ್ತರು ನನ್ನ ವಿರುದ್ಧ ಅವಮಾನಕರ ಪದ ಬಳಕೆ ಮಾಡಿದ್ದಾರೆ ಎಂದು ಸದಸ್ಯೆ ಸ್ಮೀತಾ ಪವಾರ್ ಆರೋಪ ಮಾಡಿದರೂ ಒಗ್ಗಟ್ಟಿನಿಂದ ನಿಲ್ಲಬೇಕಿದ್ದ ಬಿಜೆಪಿಯ ಸದಸ್ಯರಲ್ಲಿ ಕೆಲವರು ಪೌರಾಯುಕ್ತರ ಬೆಂಬಲಕ್ಕೆ ನಿಂತಿದ್ದು ಅಚ್ಚರಿಗೆ ಕಾರಣವಾಯ್ತು. ಕೆಲ ಸದಸ್ಯರು ಮಾತ್ರ ಸ್ಮೀತಾ ಪರ ನಿಂತರೆ, ನಗರಸಭೆ ಅಧ್ಯಕ್ಷೆ , ಉಪಾಧ್ಯಕ್ಷೆ, ಸಭಾಪತಿ ಸೇರಿ ಬಿಜೆಪಿಯ ಅನೇಕ ಸದಸ್ಯರು ಪೌರಾಯುಕ್ತರ ಪರ ಬ್ಯಾಟ್‌ ಬೀಸಿದರು. ಸದಸ್ಯರನ್ನು ಅವಮಾನಿಸಿದ ಪೌರಾಯುಕ್ತರ ವಿರುದ್ಧ ಆರೋಪದ ಚರ್ಚೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿಲ್ಲ. ಒಂದೊಮ್ಮೆ ವಿಷಯ ತಾರ್ಕಿಕ ಅಂತ್ಯಕ್ಕೆ ಹೋಗಿದ್ದರೆ ಪೌರಾಯುಕ್ತರ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳಬಹುದಾಗಿತ್ತು ಎನ್ನುವ ಮಾತುಗಳು ಕೇಳಿ ಬಂದವು.