ಹುಬ್ಬಳ್ಳಿ:ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಚಪ್ಪಲಿ ಹಾಗೂ ಕಲ್ಲು ಎಸೆದವರ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಶಿಕ್ಷೆ ವಿಧಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ವಿರೋಧಿ ಕೃತ್ಯ ಖಂಡಿಸಿ ಫೆ. 26ರಂದು ಬಾಗಲಕೋಟೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ, ಅಲ್ಲಿನ ಜಿಲ್ಲಾಡಳಿತ ನನಗೆ ಬಾಗಲಕೋಟೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಿದ್ದು ಅನುಮತಿ ಸಿಗುವ ವಿಶ್ವಾಸವಿದೆ. ಅನುಮತಿ ಸಿಕ್ಕರೆ ಹೋರಾಟದಲ್ಲಿ ಪಾಲ್ಗೊಳ್ಳುವೆ. ಇಲ್ಲದಿದ್ದರೆ ಅಂದೇ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದರು.

ಅತಿಯಾದ ತುಷ್ಟೀಕರಣ:

ರಾಜ್ಯ ಸರ್ಕಾರದ ಅತಿಯಾದ ಮುಸ್ಲಿಮರ ತುಷ್ಟೀಕರಣವೇ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗಿದೆ. ಮುಸ್ಲಿಂ ಮಾನಸಿಕತೆಯು ಹಿಂದೂಗಳನ್ನು ಅಪಮಾನ ಮಾಡುವುದು, ಔರಂಗಜೇಬ್, ಟಿಪ್ಪು, ಬಾಬರ ಪರವಾದ ನಿಲುವನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಬೆನ್ನೇಲುಬಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ವಿರೋಧಿ ನಿಲುವಿನಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ. ಸಂಪೂರ್ಣ ಮುಸ್ಲಿಂ ಸರ್ಕಾರವೆಂದು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಲ್ಲು ತೂರಾಟ ಘಟನೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ತಲೆಗೆ ಪೆಟ್ಟು ಬಿದ್ದರೂ ಪೊಲೀಸರು ಲಾಠಿ ಚಾರ್ಜ್ ಮಾಡಿಲ್ಲ. ಕಾಂಗ್ರೆಸ್ ಕುಮ್ಮಕ್ಕಿನಿಂದ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮಸೀದಿ ಒಳಗಡೆ ಕುಳಿತು ಕಲ್ಲು ಎಸೆದವರು ದೇಶದ್ರೋಹಿಗಳು, ಅವರನ್ನು ಉಗ್ರವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಸಂಘಟನೆ ಮುಖಂಡ ಶಿವಾನಂದ ಸತ್ತಿಗೇರಿ ಮಾತನಾಡಿ, ಗುರುವಾರ ಹುಬ್ಬಳ್ಳಿಯ ಅಂಬೇಡ್ಕರ್ ಸರ್ಕಲ್ ಬಳಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ವಿಶಾಲ ಜಾಧವ್, ಮಾಲತೇಶ, ಶ್ರೀಧರ ಕಲಬುರ್ಗಿ ಸೇರಿದಂತೆ ಅನೇಕರಿದ್ದರು.