ಮಂಗಳೂರು: ಕೊಡಿಯಾಲ್ಬೈಲ್ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ದೇವಿಯನ್ನು ಸ್ತುತಿಸುವ ಕನ್ನಡ ಹಾಗೂ ಮಲಯಾಳಂ ಭಾಷೆಯ ಭಕ್ತಿಗೀತೆ ‘ಅಮ್ಮ ಭಗವತೀ’ಯನ್ನು ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಇಂತಹ ಭಕ್ತಿಗೀತೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ನಮ್ಮ ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುವ ಸಾಧನಗಳಾಗಿವೆ. ಕುದ್ರೋಳಿ ಶ್ರೀ ಭಗವತಿ ಕ್ಷೇತ್ರವು ಸದಾ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಜನರಲ್ಲಿ ಭಕ್ತಿ ಹಾಗೂ ಒಗ್ಗಟ್ಟು ಬೆಳೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಭಕ್ತಿಗೀತೆ ಬಿಡುಗಡೆ ಮಾಡಿರುವುದು ಸಂಸ್ಕೃತಿಗಳ ಸೇತುವೆಯಾಗಿ ಕೆಲಸ ಮಾಡುತ್ತದೆ ಎಂದು ಅವರು ಶ್ಲಾಘಿಸಿದರು.ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಉಳ್ಳಾಲ ಶ್ರೀ ಚೀರುಂಬ ಭಗವತಿ ಕ್ಷೇತ್ರದ ಆಡಳಿತ ಮೋಕ್ತೇಸರ ಸುರೇಶ್ ಭಟ್ನಗರ, ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಟ್ರಸ್ಟಿ ಉಷಾ ಪ್ರಭಾಕರ್ ಯೆಯ್ಯಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ವಿಜಯ್ ಗುರೂಜಿ ಮಾದುಕೋಡಿ, ಸುಧೀರ್ ಬಿ.ಜಪ್ಪು ಹಾಗೂ ವೈ.ಬಿ.ಸುಂದರ್ ಇದ್ದರು.
ಈ ಭಕ್ತಿಗೀತೆಗೆ ಚಂದ್ರಶೇಖರ್ ಪಾತೂರು ಸಾಹಿತ್ಯ ರಚಿಸಿದ್ದಾರೆ. ಟಿ.ವಿ. ಗಿರಿ ಕುರ್ನಾಡು ಗಾಯನ ಮತ್ತು ಸ್ವರ ಸಂಯೋಜನೆ ನೀಡಿದ್ದು, ಮಲಯಾಳಂ ಆವೃವೃತ್ತಿಯನ್ನು ರಮೇಶ್ ಚಂದ್ರ ಬೆಂಗಳೂರು ಹಾಡಿದ್ದಾರೆ. ಗುರುರಾಜ್ ಎಂ.ಬಿ. ವಾದ್ಯ ಸಂಯೋಜನೆ ನೀಡಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರವೀಂದ್ರ ಪ್ರಭು ಮತ್ತು ಟಿ.ವಿ. ಗಿರಿ ಬಳಗದಿಂದ ‘ಭಕ್ತಿಲಹರಿ’ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.