ಸಾರಾಂಶ
ದಾವಣಗೆರೆ : ದಾವಣಗೆರೆ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 49 ಮಂದಿ ಹಿಂದು-ಮುಸ್ಲಿಮರ ಪೈಕಿ 48 ಜನ ಮಂಗಳವಾರ ರಾತ್ರಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಹಿಂದು ಜಾಗರಣಾ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಸೇರಿದಂತೆ 14 ಹಿಂದುಗಳು ಹಾಗೂ ಮುಸ್ಲಿಂ ಸಮಾಜದ 34 ಜನರಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ಹಿಂದುಗಳ ಪೈಕಿ ಓರ್ವ ವ್ಯಕ್ತಿ ದಾಖಲಾತಿಗಳಲ್ಲಿ ಒಂದಿಷ್ಟು ವ್ಯತ್ಯಾಸವಾಗಿದ್ದರಿಂದ ಜಾಮೀನು ಸಿಕ್ಕಿಲ್ಲ ಎನ್ನಲಾಗಿದೆ.
ಪ್ರಚೋದನಾಕಾರಿ ಭಾಷಣ ಮಾಡಿ ಬಂಧಿತರಾಗಿದ್ದ ಸತೀಶ ಪೂಜಾರಿ ಹಾಗೂ ಇತರರು ಬಿಡುಗಡೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಜಿಲ್ಲಾ ಕಾರಾಗೃಹದ ಬಳಿ ನೂರಾರು ಜನ ಜಮಾಯಿಸಿ, ಸತೀಶ ಪೂಜಾರಿ ಸೇರಿದಂತೆ 14 ಜನರಿಗೆ ಸ್ವಾಗತಿಸಿದರು. ನಂತರ ಕೆಟಿಜೆ ನಗರ ಹಾಗೂ ಸತೀಶ ಪೂಜಾರಿ ನಿವಾಸದಲ್ಲಿ ನೂರಾರು ಕಾರ್ಯಕರ್ತರು ಜೈಕಾರ ಹಾಕುವ ಮೂಲಕ ಸ್ವಾಗತಿಸಿದರು.
ಜಾಮೀನಿನ ಮೇಲೆ ಬಿಡುಗಡೆಯಾದ ಸತೀಶ ಪೂಜಾರಿಗೆ ಕುಟುಂಬ ಸದಸ್ಯರು ಓಕುಳಿ ಮಾಡಿ, ಆರತಿ ಎತ್ತಿ, ಹಣೆಗೆ ತಿಲಕ ಇಡುವ ಮೂಲಕ ಮನೆಗೆ ಬರ ಮಾಡಿಕೊಂಡರು. ಸತೀಶ ಪೂಜಾರಿ ಪತ್ನಿ, ಮಕ್ಕಳು, ತಂದೆ ಹಾಗೂ ನೆರೆ ಹೊರೆಯವರ ಮೊಗದಲ್ಲಿ ಮಂದಹಾಸ ಮೂಡಿತ್ತು. ಕಾರ್ಯಕರ್ತರಂತೂ ಜೈಶ್ರೀರಾಮ ಎಂಬ ಘೋಷಣೆ ಜೊತೆಗೆ ಹಿಂದು ಹುಲಿ ಸತೀಶ ಪೂಜಾರಿ ಜಯವಾಗಲಿ ಎಂಬುದಾಗಿ ಘೋಷಣೆ ಕೂಗಿ, ಸಂಭ್ರಮಿಸಿದರು.