ಗೋಕಾಕಿನಲ್ಲಿ ಬಕ್ರೀದ್‌: ಸಾಮೂಹಿಕ ಪ್ರಾರ್ಥನೆ

| Published : Jun 18 2024, 12:53 AM IST

ಸಾರಾಂಶ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿದ ಮುಸ್ಲಿಂರು ರಂಗು ರಂಗಿನ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು. ಸಾವಿರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವುದು ಹಬ್ಬದ ವಾಡಿಕೆ. ಮೌಲ್ವಿ, ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬ ಆಚರಿಸಿದರು.ಪ್ರಾರ್ಥನೆ ಬಳಿಕ ಒಬ್ಬರನೊಬ್ಬರು ಆಲಂಗಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಪಿಐ ಗೋಪಾಲ ರಾಠೋಡ ಮತ್ತು ಪಿಎಸೈ ಕೆ.ವಾಲಿಕರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡ ಮುಸ್ತಾಕ ಖಂಡಾಯತ, ಅಂಜುಮನ್‌ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ,ಅಮೀರಸಾಬ್‌ ಹಾಜಿ, ಕುತಬುದ್ದೀನ್‌ ಬಸ್ಸಾಪೂರಿ, ನಗರಸಭೆ ಸದಸ್ಯರಾದ ಅಬ್ದುಲರಹೆಮಾನ್‌ ದೇಸಾಯಿ, ಕೆ.ಎಂ.ಗೋಕಾಕ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ತಂಜಿಮ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಳನ್ನು ತೆರೆಯಲಾಗುವುದು. ನಗರದ ಹೊರ ವಲಯದಲ್ಲಿರುವ ಸಂಸ್ಥೆಯ 5 ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಮಾಜ ಬಾಂಧವರು ಈ ನಮ್ಮ ಶೈಕ್ಷಣಿಕ ಕಾರ್ಯಕ್ಕೆ ಕೈ ಜೋಡಿಸಿ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು.

-ಮುಸ್ತಾಕ್‌ ಖಂಡಾಯತ,

ಮುಸ್ಲಿಂ ಮುಖಂಡ.