ಬ್ಲಾಕ್ ಕಾಂಗ್ರೆಸ್‌ಗೆ ಬಾಳೆಮನೆ ನಟರಾಜ್‌ ನೂತನ ಅಧ್ಯಕ್ಷ

| Published : Mar 26 2024, 01:19 AM IST

ಸಾರಾಂಶ

ಕಳೆದ ೭ ವರ್ಷಗಳಿಂದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಮುರೊಳ್ಳಿಯವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ಅವರಿಗೆ ಅನೇಕ ಜವಾಬ್ದಾರಿಗಳಿರುವುದರಿಂದ ಕೆಲಸದ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಿದ್ದರು. ತೆರವಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಬಾಳೆಮನೆ ನಟರಾಜ್‌ರವರು ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಡಿ.ಎಸ್.ವಿಶ್ವನಾಥ ಶೆಟ್ಟಿ ಹೇಳಿದರು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಚುನಾವಣಾ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಕಳೆದ ೭ ವರ್ಷಗಳಿಂದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಮುರೊಳ್ಳಿಯವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ಅವರಿಗೆ ಅನೇಕ ಜವಾಬ್ದಾರಿಗಳಿರುವುದರಿಂದ ಕೆಲಸದ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಿದ್ದರು. ತೆರವಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಬಾಳೆಮನೆ ನಟರಾಜ್‌ರವರು ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಡಿ.ಎಸ್.ವಿಶ್ವನಾಥ ಶೆಟ್ಟಿ ಹೇಳಿದರು. ಸೋಮವಾರ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಕುರಿತು ನಡೆದ ನೂತನ ಅಧ್ಯಕ್ಷರ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸುಧೀರ್ ಕುಮಾರ್ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿ ಗಳಿದ್ದರು. ಚುನಾವಣೆ ಸಮೀಪವಿದ್ದುದರಿಂದ ಚುನಾವಣಾ ಪ್ರಕಿಯೆ ಮೂಲಕ ಅಧ್ಯಕ್ಷರ ಆಯ್ಕೆ ವಿಳಂಬ ವಾಗುವುದನ್ನು ಅರಿತು ಸುಧೀರ್ ಕುಮಾರ್‌ರವರನ್ನೇ ಚುನಾವಣೆ ಮುಗಿಯುವವರೆಗೂ ಮುಂದುವರಿಯುವಂತೆ ಕೇಳಿದರು. ಅವರು ಒಪ್ಪದ ಕಾರಣ ವರಿಷ್ಠರು ಅನುಭವದ ಆಧಾರದ ಮೇಲೆ ಬಾಳೆಮನೆ ನಟರಾಜ್‌ರವರನ್ನು ಆಯ್ಕೆಗೊಳಿಸಿ ಆದೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಬ್ಬರ ತೀರ್ಮಾನವೇ ಅಂತಿಮವಾಗಲಿದ್ದು ಲೋಕಸಭಾ ಚುನಾವಣೆ ಜವಾಬ್ದಾರಿ ಪೂರೈಸಲು ನಟರಾಜ್‌ರವರೇ ಅಧಿಕೃತ ಅಧ್ಯಕ್ಷರಾಗಿದ್ದಾರೆ. ಎಲ್ಲವೂ ಅವರ ಸೂಚನೆಯಂತೆಯೇ ನಡೆಯಲಿದೆ ಎಂದ ಅವರು ಕಾಂಗ್ರೆಸ್‌ನಲ್ಲಿ ಹಲವಾರು ಘಟಕಗಳಿದ್ದು ಪಕ್ಷದ ಬಲವರ್ಧನೆ ದೃಷ್ಠಿಯಿಂದ ಅಲ್ಲಲ್ಲಿ ಸಭೆ ಸೇರುವುದು, ಚರ್ಚಿಸಿ ಸಲಹೆ ನೀಡಲು ಅವಕಾಶವಿದೆ ಎಂದರು.

ನೂತನ ಅಧ್ಯಕ್ಷ ಬಾಳೆಮನೆ ನಟರಾಜ್ ಮಾತನಾಡಿ ೧೫ ವರ್ಷಗಳ ನಂತರ ನನ್ನನ್ನು ಮತ್ತೊಮ್ಮೆ ಬ್ಲಾಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಸೇರಿದಂತೆ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಹತ್ತಿರದಲ್ಲಿದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಹೆಸರು ಘೋಷಣೆಯಾಗಿದೆ. ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಒಗ್ಗೂಡಿ ಕೆಲಸ ಮಾಡಬೇಕು. ಈ ಹಿಂದೆ ಜೆಪಿ ಹೆಗಡೆಯವರು ಸಂಸದರಾಗಿದ್ದಾಗ ಅಡಕೆ ಬೆಳೆಗಾರರ ಪರ ಹೋರಾಟ ಮಾಡಿದ್ದರು. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಏ.೦೧ರಂದು ಮಧ್ಯಾಹ್ನ ಜಯಪ್ರಕಾಶ್ ಹೆಗ್ಡೆಯವರು ಕೊಪ್ಪಕ್ಕೆ ಬರಲಿದ್ದಾರೆ ಎಂದರು.

ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯಾಧ್ಯಕ್ಷ ಸಚಿನ್ ಮೀಗ, ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಜಿ. ಶೋಭಿಂತ್, ಗ್ಯಾರಂಟಿ ಯೋಜನೆ ಸಮಿತಿ ಶಶಿಕುಮಾರ್, ಅಬ್ದುಲ್ ಖಾದರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅನ್ನಪೂರ್ಣ ನರೇಶ್, ಪ್ರಜ್ವಲ್ ಶಾಮಣ್ಣ, ಕಾರ್ಯದರ್ಶಿ ಎಚ್.ಎಸ್. ಇನೇಶ್, ಬರ್ಕತ್ ಆಲಿ, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ಸಾಧಿಕ್ ನಾರ್ವೆ, ರಾಜಾಶಂಕರ್, ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ, ಪಪಂ ಮಾಜಿ ಅಧ್ಯಕ್ಷೆ ಸಿ.ಕೆ.ಮಾಲತಿ ಮುಂತಾದವರಿದ್ದರು.