ಬಾಣಂತಿಯರ ಸಾವು: ವರದಿ ಕೇಳಿದ ಉಪಲೋಕಾಯುಕ್ತ - ಸುಮೋಟೋ ಪ್ರಕರಣ ದಾಖಲಿಸಿಕೊಂಡ ನ್ಯಾ। ವೀರಪ್ಪ

| Published : Dec 01 2024, 10:55 AM IST

injection

ಸಾರಾಂಶ

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಿಕೊಂಡಿರುವ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು : ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಿಕೊಂಡಿರುವ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಘಟನೆಯ ಕುರಿತು ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ ಬಳ್ಳಾರಿ ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲಾ ಪಂಚಾಯತ್‌ ಸಿಇಒ ಅವರಿಗೂ ಸಹ ವರದಿ ನೀಡುವಂತೆ ಸೂಚಿಸಿದ್ದಾರೆ. ಮಾಧ್ಯಮಗಳಲ್ಲಿ ಬಾಣಂತಿಯರ ಸಾವು ಪ್ರಕರಣ ಬಿತ್ತರಗೊಂಡ ಬಳಿಕ ತಕ್ಷಣವೇ ಕಾರ್ಯೋನ್ಮುಖರಾದ ನ್ಯಾ.ಬಿ.ವೀರಪ್ಪ ಅವರು ಬಳ್ಳಾರಿ ಲೋಕಾಯುಕ್ತ ಎಸ್‌ಪಿ ಅವರಿಗೆ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು.

ಉಪಲೋಕಾಯುಕ್ತರ ಸೂಚನೆ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸ್‌ ಅಧಿಕಾರಿಗಳು ಘಟನೆಯ ಕುರಿತು ಪ್ರಾಥಮಿಕ ವರದಿಯನ್ನು ಪಡೆದುಕೊಂಡರು. ನಂತರ ನ್ಯಾ.ಬಿ.ವೀರಪ್ಪ ಅವರಿಗೆ ಮಾಹಿತಿ ನೀಡಿದರು. ಈ ಮಾಹಿತಿ ಮೇರೆಗೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ತಿಂಗಳಲ್ಲಿ ಪ್ರಕರಣದ ವಾಸ್ತವಾಂಶ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ.

ಬಾಣಂತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹ - ತಜ್ಞರಿಂದ ಅಧ್ಯಯನ ನಡೆಸಿ: ಸಿಎಂಗೆ ಮನವಿ

ಬೆಂಗಳೂರು

ರಾಜ್ಯದ ಆಸ್ಪತ್ರೆಗಳಲ್ಲಿ ಹೆರಿಗೆಯ ನಂತರ ತಾಯಂದಿರ ಸಾವು ಹೆಚ್ಚುತ್ತಿರುವುದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬಾಣಂತಿಯರ ಸಾವು ಯಾವ ಕಾರಣಕ್ಕೆ ಸಂಭವಿಸುತ್ತಿದೆ ಎಂದು ಅಧ್ಯಯನ ನಡೆಸಲು ರಾಜ್ಯಮಟ್ಟದ ತಜ್ಞ ವೈದ್ಯರ ತಂಡ ರಚಿಸಬೇಕು. ಈ ತಂಡದಿಂದ ವರದಿ ಪಡೆದು ಸಾವು ತಡೆಗಟ್ಟಬೇಕು ಎಂದು ಕೋರಿದ್ದಾರೆ.

ಬಾಣಂತಿಯರ ಸಾವಿಗೆ ಆಸ್ಪತ್ರೆಯ ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಾವಿಗೆ ನ್ಯಾಯಯುತ ಪರಿಹಾರ ನೀಡಬೇಕು. ಗರ್ಭಧಾರಣೆಯ ನಂತರ ಸುಸೂತ್ರ ಹೆರಿಗೆಯವರೆಗೂ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ರಚಿಸಿ ಇವುಗಳನ್ನು ಕಡ್ಡಾಯವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಪಾಲಿಸುವಂತೆ ಸರ್ಕಾರ ಸೂಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಆಸ್ಪತ್ರೆಗಳಲ್ಲಿ ‘ರಿಂಗರ್‌’ ಗ್ಲುಕೋಸ್‌ ಬಳಕೆಗೆ ಬ್ರೇಕ್‌

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಸಂಭವಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ (ಗ್ಲುಕೋಸ್‌) ಬಳಕೆಯನ್ನು ತಡೆಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐವಿ ದ್ರಾವಣದಿಂದಲೇ ಸಾವು ಸಂಭವಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅನಾಹುತಕ್ಕೆ ದ್ರಾವಣ ಕಾರಣವೇ ಎಂಬ ಬಗ್ಗೆ ಅನರೋಬಿಕ್‌ ಟೆಸ್ಟ್‌ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ. ಮುಂದಿನ ವಾರ ವರದಿ ಬರಬಹುದು ಎಂದರು.

ರಿಂಗರ್ ಲ್ಯಾಕ್ಟೇಟ್ ಗ್ಲುಕೋಸ್ ಅನ್ನು ಈ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. ಎಂದಿನಂತೆ ಈ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್​ಗಳಲ್ಲಿ‌ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್​ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್‌ಗಳ ದ್ರಾವಣವನ್ನು ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು ಎಂದರು.

ಆದರೂ ಘಟನೆ ಹೇಗೆ ನಡೆಯಿತು ಎಂಬ ಪ್ರಶ್ನೆಗೆ, ಆ ಬಳಿಕ ಕಂಪನಿಯವರು ಹೈಕೋರ್ಟ್​ನಿಂದ ಆದೇಶ ಪಡೆದ ಹಿನ್ನೆಲೆ ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ನಡೆಸಲಾಯಿತು. ಈ ವೇಳೆ ದ್ರಾವಣ ಬಳಸಬಹುದು ಎಂಬ ವರದಿ ಬಂತು. ಸಿ.ಡಿ.ಎಲ್. ವರದಿ ಆಧಾರದ ಮೇಲೆ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿ ರಚಿಸಿ ಮತ್ತೊಮ್ಮೆ ಪರೀಕ್ಷಿಸಿ ಸ್ಟ್ಯಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್​ಗಳ ದ್ರಾವಣವನ್ನು ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ದ್ರಾವಣದ ಬಳಕೆಯಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಅಂತಿಮ ವರದಿ ಬಳಿಕವಷ್ಟೇ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.

ಅನರೋಬಿಕ್ ಟೆಸ್ಟ್​ನಲ್ಲಿ ಸ್ಪಷ್ಟತೆ:

ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್​ಗಳನ್ನು ಅನರೋಬಿಕ್ ಟೆಸ್ಟ್​ಗೆ ಕಳುಹಿಸಲಾಗಿದೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣವಾಗಿರಬಹುದಾ ಅಥವಾ ಇಲ್ಲವಾ? ಎಂಬುದರ ಬಗ್ಗೆ ಅನರೋಬಿಕ್‌ ಪರೀಕ್ಷೆಯಲ್ಲಿ ಸ್ಪಷ್ಟತೆ ಸಿಗಲಿದೆ.‌ ಬಳಿಕ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮುಂಜಾಗ್ರತ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ರಾಜ್ಯಾದ್ಯಂತ ತಡೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

ಏನಿದು ಅನರೋಬಿಕ್‌ ಪರೀಕ್ಷೆ?

ವೈದ್ಯಕೀಯ ಕ್ಷೇತ್ರದಲ್ಲಿ ಅನರೋಬಿಕ್‌ ಪರೀಕ್ಷೆಯನ್ನು ಆಮ್ಲಜನಕ ಇಲ್ಲದ ಜಾಗದಲ್ಲೂ ಸಕ್ರಿಯವಾಗಿರಬಹುದಾದ ಬ್ಯಾಕ್ಟೀರಿಯಾ ಪತ್ತೆಗೆ ಬಳಸುತ್ತಾರೆ. ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದಲ್ಲಿ ಮನುಷ್ಯರ ದೇಹಕ್ಕೆ ಹಾನಿಯಾಗಬಹುದಾದ ಯಾವುದಾದರೂ ಸೂಕ್ಷ್ಮಜೀವಿಗಳು ಪತ್ತೆಯಾಗಬಹುದಾ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.