ಸಾರಾಂಶ
ಶ್ರೀನಿವಾಸಪುರ: ಹೆಣ್ಣು ಮಕ್ಕಳ ರಕ್ಷಣೆಗೆ ಪ್ರಬಲ ಕಾನೂನು ಜಾರಿ ಮಾಡುವ ಮುಖಾಂತರ ಮಹಾತ್ಮ ಗಾಂದಿ ಜಯಂತಿ ಅರ್ಥ ಪೂರ್ಣವಾಗಿ ಆಚರಿಸಲು ಕೇಂದ್ರ- ರಾಜ್ಯ ಸರ್ಕಾರಕ್ಕೆ ಪ್ರಗತಿಪರ ಕೃಷಿ ರೈತ ಮಹಿಳೆ ನಂದಿನಿ ಸಲಹೆ ನೀಡಿದರು. ಪ್ರಗತಿಪರ ರೈತ ಬಂಗವಾದಿ ನಾಗರಾಜಗೌಡ ತೋಟದಲ್ಲಿ ಕೂಲಿಕಾರ್ಮಿಕರೊಂದಿಗೆ ಮಹಾತ್ಮ ಗಾಂಧೀಜಿ ೧೫೫ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೧೨೦ನೇ ಜನ್ಮ ದಿನಾಚರಣೆಯನ್ನು ಕೂಲಿಕಾರ್ಮಿಕರಿಗೆ ಗಿಡ ನೀಡುವ ಮೂಲಕ ಆಚರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಡ ರೈತ ಕೂಲಿ ಕಾರ್ಮಿಕರ ಮಾಂಗಲ್ಯ ಕಸಿದು ಕುಟುಂಬಗಳನ್ನು ಬೀದಿ ಪಾಲು ಮಾಡುವ ಮದ್ಯ ನಿಷೇಧಿಸಿ ಬಡವರ ಬದುಕನ್ನು ಸ್ವಚ್ಛಗೊಳಿಸುವ ಸಮಾಜಮುಖಿ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಬೇಕು ಎಂದು ಸಲಹೆ ನೀಡಿದರು. ಹೆಣ್ಣು ಮಗಳೊಬ್ಬಳು ಒಬ್ಬಂಟಿಯಾಗಿ ಮಧ್ಯರಾತ್ರಿಯಲ್ಲಿ ಒಡಾಡುವಂತಾದರೆ ಅಂದೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು, ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತು ಮುಕ್ಕಾಲು ಶತಮಾನ ಕಳೆದರೂ ಹೆಣ್ಣಿನ ಮೇಲೆ ನಿರಂತರ ಶೋಷಣೆ ಮಾತ್ರ ನಿಂತಿಲ್ಲ ಎಂದು ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕಾಧ್ಯಕ್ಷ ಶಿವಾರೆಡ್ಡಿ, ತೆರ್ನಹಳ್ಳಿ ಆಂಜಿನಪ್ಪ, ಗಿರೀಶ್, ರಾಜು, ಶೈಲಜ, ಮುನಿಯಮ್ಮ, ನಾಗರತ್ನ ಚೌಡಮ್ಮ, ಸುಧಾ, ವೆಂಕಟಲಕ್ಷ್ಮೀ ಇದ್ದರು.