ಮುನಿರಾಬಾದ್: ಬುಧವಾರ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಬಾಳೆ ದಂಡಿಗೆ ಉತ್ಸವ ನಡೆಯಿತು. ಈ ಉತ್ಸವ 800 ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹುಲಿಗೆಮ್ಮದೇವಿ ಜಾತ್ರೆ ಸಂದರ್ಭದಲ್ಲಿ ಬಾಳೆ ದಂಡಿಗೆ, ಪಾಯಸ ಹಾಗೂ ಅಗ್ನಿಕೊಂಡ ಉತ್ಸವ ಮಾಡಲು ಪ್ರತ್ಯೇಕವಾಗಿ ಪೂಜಾರಿ ಮನೆತನದವರು ಇರುತ್ತಾರೆ.ಇವರು ಹುಲಿಗೆಮ್ಮದೇವಿ ದೇವಸ್ಥಾನದ ಸಂಸ್ಥಾಪಕ ನಾಗ ಜೋಗಿ ಹಾಗೂ ಬಸವ ಜೋಗಿ ವಂಶಸ್ಥರು.

ಬಾಳೆ ದಂಡಿಗೆ ಹಗುರವಾಗಿರುವುದರಿಂದ ಬೇಗ ಮುರಿಯುತ್ತದೆ.ಆದರೆ ಈ ಬಾಳೆ ದಂಡಿಗೆ ಮೇಲೆ ಪೂಜಾರಿಯನ್ನು ಕೂಡಿಸಿ ದೇವಸ್ಥಾನದ ಮೂರು ಸುತ್ತು ಪ್ರದಕ್ಷಣೆ ಹಾಕಲಾಗುತ್ತದೆ. ಆದರೂ ಬಾಳೆ ದಂಡಿಗೆ ಮುರಿಯುವುದಿಲ್ಲ.ಇದ್ದು ಹುಲಿಗೆಮ್ಮದೇವಿ ಪವಾಡ ಎನ್ನಲಾಗುತ್ತಿದೆ.

ದೇವಲೋಕದಲ್ಲಿ ಇಂದ್ರನಿಂದ ಆಚರಿಸಲ್ಪಟ್ಟ ಬಾಳೆದಂಡಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಈ ಪದ್ಧತಿ ಹುಲಿಗೆಮ್ಮ ದೇವಸ್ಥಾನದಲ್ಲಿ ಆಚರಣೆಗೆ ಬರಲು 800 ವರ್ಷಗಳ ಹಿಂದೆ ಋಷಿಮುನಿಗಳು ಹುಲಿಗಮ್ಮ ದೇವಸ್ಥಾನದ ಸ್ಥಾಪಕ ನಾಗು ಜೋಗಿ ಹಾಗೂ ಬಸವ ಜೋಗಿ ಅವರಿಗೆ ತಿಳಿಸಿದರು ಎನ್ನಲಾಗಿದೆ. ಇದನ್ನು ಹುಲಿಗೆಮ್ಮ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಆಚರಿಸಲು ನಾಗ ಜೋಗಿ ಹಾಗೂ ಬಸವ ಜೋಗಿ ನಿರ್ಧರಿಸಿದ್ದರು ಎಂದು ದೇವಸ್ಥಾನದ ಮಾಜಿ ಸದಸ್ಯ ಹಾಗೂ ಗ್ರಾಮದ ಆರ್ಯವೈಶ್ಯ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಬಾಳೆ ದಂಡಿಗೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಪವಾಡ ಮಾಡುವ ಪೂಜಾರಿ ಮನೆತನದವರು ಕಠಿಣ ಮೃತಾಚರಣೆ ಯನ್ನು ಆಚರಿಸುತ್ತಾರೆ-- ಮಾರ್ಕಂಡಪ್ಪ ಪೂಜಾರ್


ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬಾಳೆ ದಂಡಿಗೆ ಪಾಯಸ ಹಾಗೂ ಅಗ್ನಿಕೊಂಡ ಉತ್ಸವ ಮಾಡುವ ಪೂಜಾರಿ ಮನೆತನದವರು ಕಠಿಣ ವೃತ ಆಚರಿಸುತ್ತಾರೆ.

ಜಾತ್ರೆಗೂ ಮುನ್ನ ಬರುವ ಹುಣ್ಣಿಮೆಯ ಮರುದಿನ ಅಮ್ಮನವರಿಗೆ ಕಂಕಣ ಧಾರಣ ಮಾಡಲಾಗುತ್ತದೆ. ಅಂದಿನಿಂದ ಹುಲಿಗಮ್ಮದೇವಿ ಜಾತ್ರೆಯಲ್ಲಿ ಬಾಳೆದಂಡಿಗೆ,ಪಾಯಸ ಮತ್ತು ಅಗ್ನಿಕೊಂಡ ಮುಗಿಯುವವರೆಗೂ(ಸುಮಾರು 13 ದಿನಗಳವರೆಗೆ) ಪೂಜಾರಿ ಮನೆತನದವರು ಕಠಿಣ ವೃತ ಆಚರಿಸುತ್ತಾರೆ. ಅವರು ಅನ್ನ, ಉಪಹಾರ ಸೇವನೆ ಮಾಡುವುದಿಲ್ಲ. ಕೇವಲ ಹಾಲು,ಹಣ್ಣು, ಚಹಾ ಮತ್ತು ಕಾಫಿ ಮಾತ್ರ ಸೇವಿಸುತ್ತಾರೆ.

ಅಗ್ನಿಕೊಂಡ ಉತ್ಸವ ಮುಗಿದ ನಂತರ ಪೂಜಾರಿ ಮನೆತನದವರು ತಮ್ಮ ಮನೆಯಲ್ಲಿ ಜೋಗಮ್ಮ,ಮನೆಗೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ನೀಡಿದ ನಂತರ ಅವರು ಪ್ರಸಾದ ಸೇವಿಸುತ್ತಾರೆ ಎಂದು ಮಾರ್ಕಂಡಪ್ಪ ಪೂಜಾರ್ ವೃತ ಆಚರಣೆಯ ಬಗ್ಗೆ ಮಾಹಿತಿ ನೀಡಿದರು.