ಕನ್ನಡಪ್ರಭವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಗೆ ರೈತರು ಬೆಳೆದ ಬಾಳೆ, ತೆಂಗು ನೆಲಕ್ಕಚ್ಚಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು, ಅಡಿಕೆ, ತೆಂಗು, ಬಾಳೆ ತೋಟಗಳು ಸಂಪೂರ್ಣ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಮಾಡಿದ್ದ ಬಡ ರೈತರು ಕಂಗಲಾಗಿದ್ದಾರೆ. ಹೊಳವನಹಳ್ಳಿ ಸೋಂಪುರ ಮಾರ್ಗದ ಮಧ್ಯೆ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಂತರ ಅಧಿಕಾರಿಗಳು ಮರವನ್ನ ತೆರವು ಮಾಡಿ ಸಂಚಾರ ಸುಗಮಗೊಳಿಸಿದರು. ಗಾಳಿಗೆ ಸುಮಾರು ೨೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಂಬಗನ್ನು ಸರಿಪಡಿಸಿದರು. ಪಣ್ಣೇನಹಳ್ಳಿ ಗ್ರಾಮದ ರಾಜಕುಮಾರ್ ಎನ್ನುವ ರೈತನಿಗೆ ಸೇರಿದ ೨ ಎಕರೆ ಜಮೀನಿನಲ್ಲಿ ೨.೫ ಲಕ್ಷ ವೆಚ್ಚದಲ್ಲಿ ಸುಮಾರು ೧೨೦೦ ಬಾಳೆ ತೋಟ ಹಾಳಾಗಿದ್ದು, ಬೆಳೆ ಕೈಗೆ ಬಂದು ಬಾಳೆ ಕಟಾವು ಮಾಡುವ ಸಂದರ್ಭದಲ್ಲಿ ಜವರಾಯನ ಅಟ್ಟಹಾಸಕ್ಕೆ ಬಾಳೆ ತೋಟ ಸಂಪೂರ್ಣ ನೆಲ ಕಚ್ಚಿದೆ. ಸಾಲ ಮಾಡಿಕೊಂಡು ಬೆಳೆ ಬೆಳೆದಿದ್ದ ರೈತ ಬೀದಿಗೆ ಬರುವಂತೆ ಆಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.