ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದ ಲಿಂ.ಅನ್ನದಾನೇಶ್ವರ ಶ್ರೀಗಳ ಸಾವು ವಯೋಸಹಜವಾಗಿದ್ದು, ಅವರ ಪುತ್ರರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶ್ರೀಮಠದ ಭಕ್ತ ದಾನೇಶ ಜಕ್ಕಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದ ಲಿಂ.ಅನ್ನದಾನೇಶ್ವರ ಶ್ರೀಗಳ ಸಾವು ವಯೋಸಹಜವಾಗಿದ್ದು, ಅವರ ಪುತ್ರರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶ್ರೀಮಠದ ಭಕ್ತ ದಾನೇಶ ಜಕ್ಕಣ್ಣವರ ಹೇಳಿದರು.

ರಬಕವಿ ನಿರೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ದೇಹತ್ಯಾಗ ಮಡಿ ಒಂಬತ್ತು ತಿಂಗಳಾಗಿದ್ದು, ಶ್ರೀಗಳು ನಮಗೆಲ್ಲ ಪ್ರತ್ಯಕ್ಷ ದೈವರಾಗಿದ್ದರು. ಅವರ ಧಾರ್ಮಿಕ ಪರಂಪರೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಭಕ್ತರಿಂದ ರಚಿತ ಕಮಿಟಿ ಮೂಲಕ ಮುಂದುವರೆಸಿದ್ದೇವೆ. ಶ್ರೀಗಳು ದೇಹತ್ಯಾಗಕ್ಕೂ ಮುನ್ನ ಸಮಾಜದ ಹಿತದೃಷ್ಠಿಯಿಂದ ತಮ್ಮ ಆಸ್ತಿಯನ್ನು ಸಮಾಜಕ್ಕೆ ಮೀಸಲಿಡುವ ಉದ್ದೇಶದಿಂದ ವಿಲ್ ಮಾಡಿದ್ದರು. ಆದರೀಗ ಶ್ರೀಗಳ ಪುತ್ರರು ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.

ಶ್ರೀಗಳು 25 ವರ್ಷಗಳ ಹಿಂದೆಯೇ ತಮ್ಮ ಪುತ್ರರಿಗೆ ಆಸ್ತಿ ಹಂಚಿದ್ದು, ಇದೀಗ ನ್ಯಾಯಾಲಯ ಮೆಟ್ಟಿಲೇರಿರುವುದು ತರವಲ್ಲ. ಶ್ರೀಗಳ ಜೀವಿತಾವಧಿಯಲ್ಲಿ ಅವರ ಯೋಗಕ್ಷೇಮ, ಶ್ರೀಮಠದ ಕಾರ್ಯಗಳಲ್ಲಿ ಕಾಳಜಿ ತೋರದವರು ಇದೀಗ ಆರೋಪಿಸುತ್ತಿರುವುದು ಖಂಡನೀಯ. ಶ್ರೀಮಠದ ಆಸ್ತಿ ಹಾಗೂ ಧಾರ್ಮಿಕ ಪರಂಪರೆಯನ್ನು ಸಮಾಜದ ಹಿತಕ್ಕಾಗಿ ಉಳಿಸಿಕೊಳ್ಳುವುದು ಭಕ್ತರ ಕರ್ತವ್ಯವಾಗಿದ್ದು, ಶ್ರೀಗಳ ಮಾನವೀಯ ಸಂದೇಶ ಮತ್ತು ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಲು ಎಲ್ಲರೂ ಸಹಕರಿಸಬೇಕೆಂದರು.

ಈ ವೇಳೆ ಲವಿತ್ತ ಮೇತ್ರಿ, ಗಿರಮಲ್ಲ ಸಾವಂತ, ಅಲ್ಲಪ್ಪ ನಾವಿ, ಕಲ್ಲಪ್ಪ ಇಟ್ನಾಳ, ಕೆಂಚಪ್ಪ ಹಳಮನಿ, ಪ್ರಭು ನಾವಿ ಅನೇಕರಿದ್ದರು.