ಸಾರಾಂಶ
ಐಸಿಡಿಎಸ್ ಯೋಜನೆ ಕಾಯಂ ಮಾಡಲು ಒತ್ತಾಯಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಶಹಾಪುರ
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನ.28ರಂದು ಬೃಹತ್ ಪ್ರತಿಭಟನೆ ನಡೆಯಲಿದ್ದು, ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಅಂದು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಂಗನವಾಡಿ ನೌಕರರು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ತಿಳುವಳಿಕೆ ಪತ್ರವನ್ನು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮೀನಾಕ್ಷಿ ಪಾಟೀಲ್ ಅವರಿಗೆ ಸಲ್ಲಿಸಲಾಯಿತು.ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ್ ಮಾತನಾಡಿ, 1975ರಲ್ಲಿ ಐಸಿಡಿಎಸ್ ಯೋಜನೆ ಜಾರಿಗೆ ಬಂದು 49 ವರ್ಷಗಳೇ ಕಳೆದರೂ ಈ ಯೋಜನೆಯನ್ನು ಬಲಿಷ್ಠಗೊಳಿಸಲು ಮತ್ತು ಕಾಯಂ ಮಾಡಲು ಆಗಲಿಲ್ಲ ಬದಲಿಗೆ ಈ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಸತತವಾಗಿ ಕಡಿಮೆ ಮಾಡಲಾಗುತ್ತಾ ಬರಲಾಗುತ್ತಿದೆ.
ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ರಚಿಸಿದ ನಂತರ ಈ ಯೋಜನೆಗೆ ಕೇಂದ್ರದ ಪಾಲು 60% ಹಾಗೂ ರಾಜ್ಯದ ಪಾಲು 40% ಅನುದಾನವನ್ನು ಕಡಿತ ಮಾಡಿ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೊರಿಸಲಾಗಿದೆ. ಬೆಲೆ ಏರಿಕೆ ಆಧಾರದಲ್ಲಿ ಬಜೆಟ್ನಲ್ಲಿ ಅನುದಾನ ಹೆಚ್ಚಿಸುವ ಬದಲಿಗೆ 60% ಅನುದಾನದಲ್ಲಿಯೂ ಕಡಿತ ಮಾಡುತ್ತಿದೆ. ಮಾತ್ರವಲ್ಲದೆ ಮಂಜೂರಾದ ಅನುದಾನವನ್ನು ಪೂರ್ಣ ಖರ್ಚು ಮಾಡದೇ 40% ಮಾತ್ರ ಪೌಷ್ಠಿಕತೆ ಕಾರ್ಯಕ್ರಮಗಳಿಗೆ ವೆಚ್ಚಮಾಡಿ ಉಳಿದ ಅನುದಾನವನ್ನು ಬಳಕೆ ಮಾಡದೇ ಇರುವುದು ಸರ್ಕಾರ ಆಡಳಿತ ವೈಖರಿ ಆಗಿದೆ. ಐಸಿಡಿಎಸ್ ಅನ್ನು ಬಲಿಷ್ಠಗೊಳಿಸಿ ಅದಕ್ಕೆ ಬೇಕಾದ ಅಗತ್ಯ ಬಜೆಟ್ನ್ನು ಒದಗಿಸುವುದರ ಬದಲಿಗೆ ಬೇರೆ ಬೇರೆ ಹೆಸರುಗಳಲ್ಲಿ ಅನುದಾನ ಕೊಡುವುದನ್ನು ಗಮನಿಸಬೇಕಿದೆ ಎಂದು ಅವರು ತಿಳಿಸಿದರು.ಸಿಐಟಿಯು ಸಂಘಟನೆ ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿದರು. ಅಂಗನವಾಡಿ ನೌಕರರ ಸಂಘದ ವಡಗೇರಾ ತಾಲೂಕಾಧ್ಯಕ್ಷೆ ಇಂದಿರಾ ದೇವಿ ಕೊಂಕಲ್, ತಾಲೂಕು ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಚಂದಮ್ಮ ನಾಯ್ಕಲ್, ಉಪಾಧ್ಯಕ್ಷೆ ರೇಣುಕಾ ಹೊಸ್ಮನಿ, ಖಜಾಂಚಿ ಲಕ್ಷ್ಮೀ ಶಹಾಪುರ, ಮಹಾದೇವಿ ತಡಿಬಿಡಿ, ಲಕ್ಷ್ಮಿ ಗೋಗಿ, ಶಾರದಾ ನಂದಿಹಳ್ಳಿ ಇದ್ದರು.