ನಿಷ್ಟ್ರಿಯಗೊಂಡಿದ್ದ ೫೭೭೪ ರೈತರ ಬ್ಯಾಂಕ್ ಖಾತೆ ಸಕ್ರಿಯ

| Published : May 18 2024, 12:34 AM IST

ನಿಷ್ಟ್ರಿಯಗೊಂಡಿದ್ದ ೫೭೭೪ ರೈತರ ಬ್ಯಾಂಕ್ ಖಾತೆ ಸಕ್ರಿಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಂತ್ರಿಕ ಕಾರಣದಿಂದ ಪರಿಹಾರ ಸಿಗದೇ ತೊಂದರೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಾರವಾರ: ಜಿಲ್ಲೆಯ ೫೭೭೪ ರೈತರ ಬ್ಯಾಂಕ್ ಖಾತೆಗಳಲ್ಲಿನ ಹಲವು ನ್ಯೂನತೆಗಳನ್ನು ೩ ದಿನಗಳ ಕಾಲ ಅವಿರತವಾಗಿ ಶ್ರಮಿಸಿ, ಸಮಸ್ಯೆಗಳನ್ನು ಸರಿಪಡಿಸಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಯ ಪರಿಹಾರದ ಮೊತ್ತವನ್ನು ಪಡೆಯಲು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ನ್ಯೂನತೆ ಸರಿಪಡಿಸಿದ ಬಳಿಕ ಜಿಲ್ಲಾಡಳಿತವು ಈ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಇದುವರೆಗೆ ಬಾಕಿ ಇರುವ ಬೆಳೆಹಾನಿ ಪರಿಹಾರದ ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

ಜಿಲ್ಲೆಯ ರೈತರಿಗೆ ಇದುವರೆಗೆ ಒಟ್ಟೂ ₹೩೬.೦೬ ಕೋಟಿ ಬರ ಪರಿಹಾರ ಮೊತ್ತವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು, ಪ್ರಸ್ತುತ ಬ್ಯಾಂಕ್ ಖಾತೆ ಸಮಸ್ಯೆಯಿಂದ ಮುಕ್ತವಾಗಿರುವ ಅರ್ಹ ರೈತರಿಗೆ ಕೂಡಾ ನಿಗದಿತ ಪರಿಹಾರದ ಮೊತ್ತ ಅವರ ಖಾತೆಗಳಿಗೆ ಜಮೆ ಆಗಲಿದೆ.

ಬರ ಪೀಡಿತ ತಾಲೂಕುಗಳಾದ ಕಾರವಾರದಲ್ಲಿ ೧೩೪, ಜೋಯಿಡಾದ ೨೩೩, ಹಳಿಯಾಳದ ೧೨೬೬, ಯಲ್ಲಾಪುರದ ೨೬೯, ಮುಂಡಗೋಡದ ೪೧೨, ಶಿರಸಿಯ ೪೨೨, ಅಂಕೋಲಾದ ೧೦೫೨, ಕುಮಟಾದ ೮೧೩, ಸಿದ್ದಾಪುರದ ೫೭೨, ಭಟ್ಕಳದ ೫೪೪ ಹಾಗೂ ದಾಂಡೇಲಿಯ ೫೭ ರೈತರ ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟೂ ೫೭೭೪ ರೈತರಿಗೆ ಅವರ ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ, ಆಧಾರ್ ಮ್ಯಾಚ್‌ ಆಗದೇ ಇರುವುದು, ಆಧಾರ್ ಸೀಡಿಂಗ್ ಸಮಸ್ಯೆ, ಹೆಸರುಗಳ ಮಿಸ್ ಮ್ಯಾಚ್, ಅಕೌಂಟ್ ಕ್ಲೋಸ್, ಅಕೌಂಟ್ ಬ್ಲಾಕ್ ಆಗಿರುವುದು, ಫ್ರುಟ್ಸ್ ತಂತ್ರಾಂಶ ಮತ್ತು ಆಧಾರ್‌ನಲ್ಲಿನ ಹೆಸರುಗಳ ಹೋಲಿಕೆಯಾಗದೇ ಇರುವುದು, ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಮೊತ್ತ ಇದುವರೆಗೆ ಜಮೆ ಆಗಿರಲಿಲ್ಲ.

ಈ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಬರಪೀಡಿತ ೧೧ ತಾಲೂಕುಗಳಲ್ಲಿನ ತಹಸೀಲ್ದಾರ್ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ತೆರೆಯುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಿತ್ತು. ಅಲ್ಲದೇ ಇದುವರೆಗೆ ವಿವಿಧ ಕಾರಣಗಳಿಂದ ಪರಿಹಾರ ಜಮೆ ಆಗದ ರೈತರ ಪಟ್ಟಿ ಮಾಡಿ, ಅವರ ದೂರವಾಣಿಗೆ ಕರೆ ಮಾಡಿ, ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಬ್ಯಾಂಕ್ ಖಾತೆ ಸಂಬಂಧಿಸಿದ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿ, ದಾಖಲೆಗಳನ್ನು ಪಡೆದು ಫಲಾನುಭವಿಗಳನ್ನು ಜತೆಯಲ್ಲಿಯೇ ಬ್ಯಾಂಕ್ ಗಳಿಗೆ ಕರೆದುಕೊಂಡು ಹೋಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ತಾಂತ್ರಿಕ ಕಾರಣದಿಂದ ಪರಿಹಾರ ಸಿಗದೇ ತೊಂದರೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಸಮರೋಪಾದಿಯಲ್ಲಿ ಕರ್ತವ್ಯ: ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಯ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಬೆಳೆ ಪರಿಹಾರದ ಮೊತ್ತವು ಬ್ಯಾಂಕ್ ಖಾತೆಗಳಿಗೆ ಜಮೆ ಆಗಿಲ್ಲದೇ ಇದ್ದ ೫೭೭೪ ರೈತರನ್ನು ಗುರುತಿಸಲಾಗಿತ್ತು. ಈ ಎಲ್ಲ ರೈತರನ್ನು ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ವೈಯಕ್ತಿಕವಾಗಿ ಸಂಪರ್ಕಿಸಿ ಅವರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ದಾಖಲೆಗಳೊಂದಿಗೆ ಅವರನ್ನು ಬ್ಯಾಂಕ್ ಗಳಿಗೆ ಕರೆದುಕೊಂಡು ಹೋಗಿ, ಎಲ್ಲ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿದ್ದಾರೆ. ಅವರೆಲ್ಲರಿಗೆ ಬೆಳೆ ಪರಿಹಾರದ ಮೊತ್ತ ದೊರೆಯುವಂತೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಎಲ್ಲ ಅರ್ಹ ರೈತರಿಗೆ ಬೆಳೆ ಪರಿಹಾರದ ಮೊತ್ತವನ್ನು ದೊರೆಯುವಂತೆ ಮಾಡಲು ೩ ದಿನಗಳ ಕಾಲ ಜಿಲ್ಲಾಡಳಿತದಿಂದ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.