ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬ್ಯಾಂಕ್ ಆಫ್ ಬರೋಡಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಪ್ರಾಂಶುಪಾಲ ಗುರುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾಂಕ್ನ 118ನೇ ವರ್ಷದ ಸಂಸ್ಥಾಪನ ದಿನ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸಸಿ ನೆಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಬ್ಯಾಂಕ್ ಆಫ್ ಬರೋಡಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಯುವಕ ಯುವತಿಯರಿಗೆ ಉಚಿತ ತರಬೇತಿಯನ್ನು ಜಿಲ್ಲೆಯಲ್ಲಿ ನೀಡುತ್ತಿರುವುದು ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕ ನವೀನ್ ಕುಮಾರ್ ಮಾತನಾಡಿ, ಸರ್ಕಾರಿ ವಸತಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹಣ್ಣಿನ ಗಿಡಗಳನ್ನು ದತ್ತು ನೀಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮಾಡಿಸಲಾಗುತ್ತಿದೆ ಎಂದರು.
ಪರಿಸರ ಉಳಿಸಿದರೆ ಮಾತ್ರ ಮನುಕುಲ ಉಳಿವು. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸೋಣ. ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸೋಣ ಎಂದು ಕರೆ ನೀಡಿದರು.ಇದೇ ವೇಳೆ 118 ಹಣ್ಣಿನ ಸಸಿಗಳನ್ನು ಮಕ್ಕಳಿಗೆ ದತ್ತು ನೀಡುವ ಜೊತೆಗೆ ಶಾಲೆಗೆ ಕಸದ ಪುಟ್ಟಿ ವಿತರಣೆ, ಪರಿಸರ ಜಾಗೃತಿ ಜಾಥ, ಹಾಗೂ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಉಪ ಪ್ರಾದೇಶಿಕ ಉಪ ವ್ಯವಸ್ಥಾಪಕ ಸುಹಾಸ್, ಮಾರ್ಗದರ್ಶಿ ಬ್ಯಾಂಕ್ ನ ಅರುಣ್ ಕುಮಾರ್, ತರಬೇತಿ ಸಂಸ್ಥೆಯ ಪ್ರಸನ್ನಕುಮಾರ್, ಬ್ಯಾಂಕ್ ಆಫ್ ಬರೋಡಾ ಕೆರಗೋಡು ಶಾಖೆ ವಿನೋದ್ ಮತ್ತು ಉಪನ್ಯಾಸಕರಾದ ಸಂತೋಷ್ ಉಪಸ್ಥಿತರಿದ್ದರು.