ಸರ್ಕಾರದ ವಾಣಿಜ್ಯ ಇಲಾಖೆಯ ಕೋರಿಕೆಯನ್ನು ತಿರಸ್ಕರಿಸಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) ಹರಾಜಿಗಿಟ್ಟಿದ್ದಕ್ಕೆ ಬೇಸತ್ತು ರೈತರು, ಬಿಜೆಪಿ ಶಾಸಕರು ಡಿಸಿಸಿ ಬ್ಯಾಂಕ್‌ ಮುತ್ತಿಗೆಗೆ ಯತ್ನಿಸಿದರಲ್ಲದೆ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ರಾಜೀನಾಮೆ ನೀಡುವ ಮೂಲಕ ಬ್ಯಾಂಕ್‌ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದ ಘಟನೆ ನಡೆಯಿತು

ಕನ್ನಡಪ್ರಭ ವಾರ್ತೆ ಬೀದರ್‌

ಸರ್ಕಾರದ ವಾಣಿಜ್ಯ ಇಲಾಖೆಯ ಕೋರಿಕೆಯನ್ನು ತಿರಸ್ಕರಿಸಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) ಹರಾಜಿಗಿಟ್ಟಿದ್ದಕ್ಕೆ ಬೇಸತ್ತು ರೈತರು, ಬಿಜೆಪಿ ಶಾಸಕರು ಡಿಸಿಸಿ ಬ್ಯಾಂಕ್‌ ಮುತ್ತಿಗೆಗೆ ಯತ್ನಿಸಿದರಲ್ಲದೆ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ರಾಜೀನಾಮೆ ನೀಡುವ ಮೂಲಕ ಬ್ಯಾಂಕ್‌ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದ ಘಟನೆ ನಡೆಯಿತು.

ನಗರದ ಪ್ರವಾಸಿ ಮಂದಿರದಿಂದ ರೈತರು ಡಿಸಿಸಿ ಬ್ಯಾಂಕ್‌ ವಿರುದ್ಧ ಹಾಗೂ ಕಾರ್ಖಾನೆ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಡಿಸಿಸಿ ಬ್ಯಾಂಕ್‌ವರೆಗೆ ಪ್ರತಿಭಟನೆ ನಡೆಸಿದರು. ರೈತರ ಜೊತೆಯಲ್ಲಿ ಹುಮನಾಬಾದ್‌ ಶಾಸಕ ಡಾ.ಸಿದ್ದು ಪಾಟೀಲ್, ಬೀದರ್‌ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ಅವರುಗಳು ಪ್ರತಿಭಟನೆ ತೆರಳಿ ಡಿಸಿಸಿ ಬ್ಯಾಂಕ್‌ ಮುಖ್ಯ ಗೇಟ್‌ ಬಳಿ ತೆರಳಿ ಪೊಲೀಸರೊಂದಿಗೆ ತಳ್ಳಾಟ ನಡೆಸಿ ದರು. ನಂತರ ರೈತರು ಗೇಟ್‌ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ನ್ನು ರೈತರು ತೆಗೆದುಹಾಕಿ ಮುಖ್ಯ ಗೇಟ್‌ ತೆರೆದು ರೈತರು ಹಾಗೂ ಪ್ರತಿಭಟನಾಕಾರರು ಬ್ಯಾಂಕ್‌ ಪ್ರಾಂಗಣಕ್ಕೆ ನುಗ್ಗಿ ಬ್ಯಾಂಕಿನ ಬಾಗಿಲು ಬಳಿ ನಿಂತು ಘೋಷಣೆ ಕೂಗಿದರು.

ಅಭಿಷೇಕ್‌ ಡಬಲ್‌ ಗೇಮ್‌, ರಾಜೀನಾಮೆ ಕೊಡಲಿ: ಹುಮನಾಬಾದ್‌ ಶಾಸಕ ಡಾ. ಸಿದ್ದು ಪಾಟೀಲ್‌ ಮಾತನಾಡಿ, ಈ ಹಿಂದೆ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅ‍ವರು ಯಾವುದೇ ಕಾರಣಕ್ಕೂ ಹರಾಜು ನಡೆಯಲ್ಲ ಎಂದಿದ್ದರು ಆದರೆ ಬ್ಯಾಂಕಿನ ಉಪಾಧ್ಯಕ್ಷರಾದ ಅವರ ಪುತ್ರ ಅಭಿಷೇಕ ಪಾಟೀಲ್‌ ಹರಾಜು ಪ್ರಕ್ರಿಯೆ ಆರಂಭಿಸಿ ರೈತರಿಗೆ ಮೋಸ ಮಾಡಲು ಹೋರಟಿದ್ದಾರೆ ಇಂತಹ ಡಬಲ್‌ಗೇಮ್‌ ಬಿಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ಹೋರಾಟಕ್ಕೆ ಇಳಿಯಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಆ.27ರಂದು ಸರ್ಕಾರಿಂದ ಪತ್ರ ಬರೆದು ಯಾವುದೇ ಕಾರಣಕ್ಕೂ ಬಿಎಸ್ಎಸ್‌ಕೆ ಹರಾಜು ಮಾಡಬಾರದು, ಅದನ್ನು ಗುತ್ತಿಗೆ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬ್ಯಾಂಕ್‌ಗೆ ಪತ್ರ ಬರೆದಿದ್ದರೂ ಅದನ್ನು ಲೆಕ್ಕಿಸದ ಡಿಸಿಸಿ ಬ್ಯಾಂಕ್‌ ಹರಾಜಿಗೆ ಮುಂದಾಗಿದೆ, ಹರಾಜಿಗೆ ನಾವು ಬಿಡೋಲ್ಲ ಎಂದರು. ಹರಾಜು ಪ್ರಕ್ರಿಯೆ ಸಮಯ ಮುಗಿದ ನಂತರ ಹರಾಜು ನಡೆಯಲಿಲ್ಲ ಎಂದು ಖಾತ್ರಿ ಪಡಿಸಿಕೊಂಡು ರೈತರು, ಪ್ರಮುಖರು ಅಲ್ಲಿಂದ ಹೊರನಡೆದರು. ಬಿಜೆಪಿ ನಗರ ಅಧ್ಯಕ್ಷ ಶಶಿಧರ ಹೋಸಳ್ಳಿ, ರೈತ ಸಂಘದ ಪ್ರಮುಖರು ಹಾಗೂ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

---

ನಾವ್ಯಾರೂ ಕಾರ್ಖಾನೆಯದ್ದಾಗಲಿ, ರೈತರದ್ದಾಗಲಿ ವಿರೋಧಿಯಲ್ಲ. ಡಿಸಿಸಿ ಬ್ಯಾಂಕ್‌ ಸಹ ರೈತರದ್ದೆ ಅದರ ಹಿತದೃಷ್ಠಿಯನ್ನು ಮುಂದಿಟ್ಟುಕೊಂಡು ಹರಾಜು ಪ್ರಕ್ರಿಯೆಗೆ ನಿರ್ಧರಿಸಿದ್ದೇವು, ಹರಾಜಿನಲ್ಲಿ ಪಾಲ್ಗೊಳ್ಳಲು ಯಾರೂ ಬಾರದಿದ್ದರಿಂದ ಹರಾಜು ಮುಂದೂಡಿದಿದ್ದೇವೆ, ಸರ್ಕಾರ ಹಾಗೂ ಶಾಸಕರುಗಳು ಕಾರ್ಖಾನೆ ಯನ್ನು ಗುತ್ತಿಗೆ ಕೊಡಿಸುವುದಾಗಿ ತಿಳಿಸಿದ್ದಾರೆ ಇದನ್ನು ನಂಬಿ ಸ್ವಲ್ಪ ದಿನ ಕಾದು ನೋಡಿ ಮುಂದಿನ ಹೆಜ್ಜೆ ಇಡುತ್ತೇವೆ.

- ಮಂಜುಳಾ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕಿ

---

ಬೆಳಿಗ್ಗೆ ಬಿಜೆಪಿ, ಮಧ್ಯಾಹ್ನ ಖಂಡ್ರೆ ಚೇಂಬರ್‌ನಲ್ಲಿ ಗಿರಕಿ

ಕನ್ನಡಪ್ರಭ ವಾರ್ತೆ ಬೀದರ್‌

ಡಬಲ್‌ ಗೇಮ್‌ ಆಡೋ ಗುಣ ದಿ.ಬಸವರಾಜ ಪಾಟೀಲ್‌ ಹುಮನಾಬಾದ್‌ ಅವರ ಕುಟುಂಬದ ರಕ್ತದಲ್ಲಿಲ್ಲ. ಅದೇನಿದ್ದರೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಗುಣ. ದಿನಕ್ಕೆರೆಡು ಬಾರಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಗುಣಗಾನ ಮಾಡ್ತಿದ್ದವರು ಅವರನ್ನೀಗ ಮರೆತು ಸಚಿವ ಈಶ್ವರ ಖಂಡ್ರೆ ಸುತ್ತ ನಿತ್ಯ ಗಿರಕಿ ಹೊಡೆಯುತ್ತಿರುವ ಇವರು ಡಬಲ್‌ ಗೇಮ್‌ ಆಡ್ತಿದ್ದಾರೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಆರೋಪಿಸಿದ್ದಾರೆ.

ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿರುವ ಡಾ.ಸಿದ್ದು ಪಾಟೀಲ್‌ ಹಾಗೂ ಡಾ.ಶೈಲೇಂದ್ರ ಬೆಲ್ದಾಳೆ ಮಧ್ಯಾಹ್ನ ಸಚಿವ ಈಶ್ವರ ಖಂಡ್ರೆ ಅವರ ಚೇಂಬರ್‌ನಲ್ಲಿ ಇರ್ತಾರೆ. ನಿತ್ಯ ಖಂಡ್ರೆ ಮುಂದೆ ಹಾಜರ್‌ ಇರ್ತಾರೆ. ಇದಕ್ಕೆ ಡಬಲ್‌ ಸ್ಟ್ಯಾಂಡರ್ಡ್‌ ಅಂತಾರೆ ಆದರೆ ರಾಜಶೇಖರ ಪಾಟೀಲ್‌ ಬೀದರ್‌ನಲ್ಲೂ ಒಂದೇ ಕಡೆ ಇರ್ತಾರೆ ಬೆಂಗಳೂರಲ್ಲೂ ಒಂದೇ ಕಡೆ ಇರ್ತಾರೆ, ಖೂಬಾ ಆಗಲಿ ಖಂಡ್ರೆ ಅವರದ್ದಾಗಲಿ ಕಾಲು ಬೀಳೋಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಅಮರ್‌ ಖಂಡ್ರೆ ಅವರ ಸಹೋದರ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರು, ಅವರ ಜೊತೆಗೆ ಈ ಬಿಜೆಪಿ ಶಾಸಕರು ಎಂದಾದರೂ ಮಾತನಾಡಿದ್ದಾರೆಯೇ, ಅಷ್ಟಕ್ಕೂ ಡಾ.ಬೆಲ್ದಾಳೆ ಅವರ ತಾಯಿ ಕೂಡ ಡಿಸಿಸಿ ಬ್ಯಾಂಕ್‌ ನಿರ್ದೇಶಕರು ಅವರಿಗೂ ರಾಜೀನಾಮೆ ಕೊಡಿಸಲಿ ನೋಡೋಣ ಎಂದರು.

ಠೇವಣಿ ಖಾಲಿ ಆಗೋ ಆತಂಕ :

ಇನ್ನು ‘ಕನ್ನಡಪ್ರಭ’ಕ್ಕೆ ಮಾತನಾಡಿ, ಡಿಸಿಸಿ ಬ್ಯಾಂಕ್‌ನವರು ಇದೇ ವರ್ತನೆಯನ್ನು ಮುಂದುವರೆಸಿದರೆ ಬ್ಯಾಂಕ್‌ ಭಾರಿ ಹಾನಿ ಎದುರಿಸಬೇಕಾಗುತ್ತದೆ. ಈಗಾಗಲೇ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸ್ಥಾನಕ್ಕೆ ಅಭಿಷೇಕ ಪಾಟೀಲ್‌ ಹಾಗೂ ನಿರ್ದೇಶಕಕ್ಕೆ ಉಮೇಶ ಕುಲಕರ್ಣಿ ರಾಜೀನಾಮೆ ಕೊಟ್ಟಿದ್ದು ಇನ್ನಷ್ಟು ನಿರ್ದೇಶಕ ರು ರಾಜೀನಾಮೆ ಕೊಡುವ ಸಾಧ್ಯತೆಯಿದೆ. ಇದರಿಂದ ಬ್ಯಾಂಕ್‌ ಠೇವಣಿದಾರರ ನಂಬಿಕೆ ಕಳೆದುಕೊಂಡು ಭಾರಿ ಅನಾಹುತಕ್ಕೆ ಕಾರಣ ಆಗಬಹುದು ಎಂದರು.

ಕಾರ್ಖಾನೆಯ ಹರಾಜು ಪ್ರಕ್ರಿಯೆ ನಿಲ್ಲಿಸಲು ಸಕ್ಕರೆ ಸಚಿವರೊಂದಿಗೆ ಕಾರ್ಖಾನೆಯ ಎಂಡಿಗೆ ಫೋನಾಯಿಸಿ ಮಾತನಾಡಿಸಿದೆ, ಕೊನೆ ಘಳಿಗೆಯಲ್ಲಿ ಸಹಕಾರ ಇಲಾಖೆಯ ಪತ್ರ ಕೇಳಿದರು, ಏನೇ ಆಗಲಿ ಕಾರ್ಖಾನೆಯ ಹರಾಜಿಗೆ ಬಿಡೋದಿಲ್ಲ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ತಿಳಿಸಿದರು.

ಅಭಿಷೇಕ ಪಾಟೀಲ್‌, ಉಮೇಶ ಕುಲಕರ್ಣಿ ರಾಜೀನಾಮೆ: ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ಪ್ರಕ್ರಿಯೆಯ ಕಿಡಿ ಜೋರಾಗಿ ಹೊತ್ತಿಕೊಳ್ಳುತ್ತಿದ್ದಂತೆ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ನಿರ್ದೇಶಕ ಉಮೇಶ ಕುಲಕರ್ಣಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕರಿಗೆ ಸಲ್ಲಿಸಿದ ಪತ್ರದಲ್ಲಿ ರೈತರ ಹಿತ ದೃಷ್ಟಿಯಿಂದ ಮತ್ತು ವೈಯಕ್ತಿಕ ಕಾರಣ ಹಾಗೂ ಅನಿವಾರ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಹುದ್ದೆಗೆ ರಾಜಿನಾಮೆ ಸಲ್ಲಿಸಲು ನಿರ್ಧಿರಿಸಿದ್ದೇನೆ ಆದ್ದರಿಂದ ಹುದ್ದೆಯ ಜವಾಬ್ದಾರಿ ಗಳಿಂದ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.