ಮಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳೂರಿನಲ್ಲಿ ಆಯ್ದ ಕೆಲವು ವ್ಯಾಪಾರ ಮತ್ತು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಶನಿವಾರ ಸಂವಾದ ನಡೆಸಿದರು.ಇದು ಆಂತರಿಕ ಸಮಾಲೋಚನೆಯಾಗಿದ್ದು, ಲಭ್ಯ ಮಾಹಿತಿ ಪ್ರಕಾರ ಕಸ್ಟಂಸ್ ಅಧಿಕಾರಿಗಳು ಈ ಸಭೆಯನ್ನು ಆಯೋಜಿಸಿದ್ದರು.
ಮಧ್ಯಪ್ರಾಚ್ಯ ಯುದ್ಧದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಿಗೆ ಇಸಿಎಲ್ ಜಿಎಸ್ (ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ) ಅಡಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ, ಅಡಮಾನ ಇಲ್ಲದೆ ಸಾಲದ ನೆರವು ಯೋಜನೆ ಘೋಷಿಸಿದ್ದರೂ, ಇದಕ್ಕೆ ನಮ್ಮ ರಾಜ್ಯದಲ್ಲಿ ಅನೇಕ ಬ್ಯಾಂಕ್ ಗಳು ಆಸ್ತಿ ಲಿಂಕ್ ಮಾಡುವ ಮೂಲಕ ಉದ್ಯಮಿಗಳಿಗೆ ಹೊರೆಯಾಗುತ್ತಿರುವುದನ್ನು ಗಮನಕ್ಕೆ ತಂದರು.ಈ ಕುರಿತು ಸಚಿವರು, ಯಾವುದೇ ಕಾರಣಕ್ಕೂ ಬ್ಯಾಂಕ್ ಗಳ ಇಂತಹ ಕ್ರಮ ಸಹಿಸುವುದಿಲ್ಲ, ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಸ್ಪಷ್ಟ ಸೂಚನೆ ನೀಡಲಾಗುವುದು ಎಂದರು.ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಿಬಿಐಸಿ ಅಧ್ಯಕ್ಷ ವಿವೇಕ್ ಚತುರ್ವೇದಿ, ಸಿಬಿಐಸಿ ಸದಸ್ಯ ಯೋಗೇಂದ್ರ ಗರ್ಗ್, ಉದ್ಯಮಿಗಳು, ನಗರದ ಕೆಲವು ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನವಮಂಗಳೂರು ಬಂದರಿಗೆ ಭೇಟಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅಲ್ಲಿನ ಚಟುವಟಿಕೆಗಳು, ಮೂಲಸೌಕರ್ಯ ಇತ್ಯಾದಿಗಳ ಪರಿಶೀಲನೆ ನಡೆಸಿದರು.
