ಬಂಟ್ವಾಳ: ಪ್ರತಿಯೊಬ್ಬರಿಗೂ ಹವ್ಯಾಸ ಬೇಕು. ವ್ಯರ್ಥವಾಗದಂತೆ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಪರಿಸರ, ಪಕ್ಷಿ, ಪ್ರಾಣಿಗಳ ಫೋಟೋ ಕ್ಲಿಕ್ಕಿಸುವುದು ಸುಲಭವಲ್ಲ. ಆ ಫೋಟೋಗಳ ಪ್ರದರ್ಶನ ಇನ್ನೂ ಕಷ್ಟ. ಈ ಕಾರ್ಯ ಮಾಡುವುದರ ಜತೆಗೆ ಯುವ ಪೀಳಿಗೆಗೆ ಅರಿವು ನೀಡಿದ್ದು ಉದ್ಯಮಿ ರಾಧಾಕೃಷ್ಣ ಪೈ ಅವರು ಮಾದರಿ, ಆದರ್ಶ ಮತ್ತು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಬೆಂಗಳೂರಿನ ಯು.ಕೆ. ಆಂಡ್ ಕೋ ಫೌಂಡರ್ ಕೆ. ಉಲ್ಲಾಸ್ ಕಾಮತ್ ಹೇಳಿದರು.ವಿಟ್ಲ ಹನುಮಗಿರಿಯಲ್ಲಿ ನಡೆದ ಪಿ.ರಾಧಾಕೃಷ್ಣ ಪೈ ಅವರ ಛಾಯಾಗ್ರಹಣ ಕುರಿತ ಒಂದು ಗರಿಯ ಕಥೆ ವಿಶೇಷ ಪುಸ್ತಕದ ಬಿಡುಗಡೆ ಹಾಗೂ ಪಕ್ಷಿ, ಪ್ರಾಣಿಗಳ ಫೋಟೋ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುತ್ತೂರು ನರಸಿಂಹ ನಾಯಕ್ ಹಾಗೂ ಕೆ. ಜಿ. ಶೆಣೈ ಅವರು ಇ-ಪುಸ್ತಕ ಅವತರಣಿಕೆಗಳನ್ನು ಬಿಡುಗಡೆಗೊಳಿಸಿದರು. ನಿಸರ್ಗದ ಫೋಟೋ ಪ್ರದರ್ಶನವನ್ನು ಸುರೇಶ್ ಫಡ್ನೀಸ್ ಉದ್ಘಾಟಿಸಿದರು. ವೆಬ್ ಸೈಟ್ ಲೋಕಾರ್ಪಣೆಯನ್ನು ಎಕ್ಪರ್ಟ್ ಸಂಸ್ಥೆಯ ನರೇಂದ್ರ ನಾಯಕ್, ಉಷಪ್ರಭಾ ನಾಯಕ್ ಮಾಡಿದರು. ನಿವೃತ್ತ ಪ್ರಾಂಶುಪಾಲ ಎಂ. ಅನಂತಕೃಷ್ಣ ಹೆಬ್ಬಾರ್, ಸಕಲೇಶಪುರ ಸೀನಿಯರ್ ಸಿವಿಲ್ ಜಡ್ಜ್ ಆಂಡ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜಯಪ್ರಕಾಶ್ ವಿ., ಜೇಸಿಐ ಇಂಡಿಯಾ ಹಿರಿಯ ತರಬೇತುದಾರ ಶ್ರೀಧರ್ ಕೊಡಕ್ಕಲ್, ಡಾ.ಅರುಂಧತಿ ಧಾರೇಶ್ವರ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಪ್ರಾಂಶುಪಾಲ ರಘು ಟಿ.ವೈ. ಅನುರಾಧಾ ರಾಧಾಕೃಷ್ಣ ಪೈ, ಶ್ರದ್ಧಾ-ಸಂಕೇತ್, ಶ್ರೇಯಾ-ಸೌರಭ್ ಮತ್ತಿತರರು ಉಪಸ್ಥಿತರಿದ್ದರು.

ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆ, ವಿಟ್ಲ ಜೆಸಿಐ ವಿದ್ಯಾಸಂಸ್ಥೆ, ವಿಟ್ಠಲ ಪದವಿಪೂರ್ವ ಕಾಲೇಜು, ಸರ್ಕಾರಿ ಮಾದರಿ ಶಾಲೆ, ಸಿರಿ ವಿದ್ಯಾಸಂಸ್ಥೆ ಸಾಲೆತ್ತೂರು, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಮತ್ತು ಗಣ್ಯರಿಗೆ ಪುಸ್ತಕದ ಪ್ರತಿಯನ್ನು ನೀಡಲಾಯಿತು.ಉದ್ಯಮಿ ಪಿ.ರಾಧಾಕೃಷ್ಣ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಉದ್ಯಮಿ ಸುಬ್ರಾಯ ಪೈ ವಂದಿಸಿದರು. ಶಿಕ್ಷಕ ಅರವಿಂದ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.